ವಿಧಾನಸೌಧದಲ್ಲಿ ಶಂಖ, ಜಾಗಟೆಗಳ ಗಲಾಟೆ!
ಇಲ್ಲ, ಕರ್ನಾಟಕದ ಆಡಳಿತ ಕಚೇರಿಯಲ್ಲಿ ಯಾವುದೇ ಮಂಗಳ ಕಾರ್ಯ ಜರುಗುತ್ತಿರಲಿಲ್ಲ. ಬದಲಿಗೆ ಆಡಳಿತ ಪಕ್ಷವನ್ನು ವಿರೋಧಿಸಿ ವಿರೋಧ ಪಕ್ಷದವರು ಮಾಡುತ್ತಿರುವ ಗದ್ದಲದ ಜೊತೆ ಜಾಗಟೆ, ಶಂಖಗಳೂ ಸೇರಿಕೊಂಡು ಗದ್ದಲಕ್ಕೂ ಒಂದು ಇಂಪನ್ನು ತಂದಿದ್ದವು.
ಎರಡು ಸೂಟ್ ಕೇಸುಗಳನ್ನು ಹಿಡಿದುಕೊಂಡು ಶಂಖ, ಜಾಗಟೆಯನ್ನು ಬಾರಿಸುತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ವಿಧಾನಸಭೆಯನ್ನು ಪ್ರವೇಶಿಸಿದರು. ಬಿಜೆಪಿಯ ನಾಯಕ ಮತ್ತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಎಲ್ಲಾ ಹಗರಣಗಳನ್ನು ಸೂಟ್ ಕೇಸ್ ನಲ್ಲಿನ ದಾಖಲೆಗಳು ಬಯಲಿಗೆಳೆಯಲಿವೆ ಎಂದು ಕೂಗುತ್ತಲೇ ಪ್ರವೇಶ ಮಾಡಿದರು.
ಶಂಖ, ಜಾಗಟೆಗಳ ನಿನಾದಕ್ಕೆ ಮೈಮರೆಯದ ಮಾರ್ಷಲ್ ಗಳು ಸೂಟ್ ಕೇಸನ್ನು ತೆಗೆಯಲು ಅವಕಾಶವನ್ನೇ ನೀಡದೆ ಬಾಗಿಲಿನ ದಾರಿ ತೋರಿಸಿದರು. ಸೂಟ್ ಕೇಸುಗಳ ಹಿಂದೆಯೇ ಸದನದ ಬಾವಿಗೆ ನುಗ್ಗಿ ಯಡಿಯೂರಪ್ಪ ಮತ್ತು ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ವಿರೋಧ ಪಕ್ಷದವರು ಸಭಾತ್ಯಾಗ ಮಾಡಿದರು. ಅಧಿವೇಶನವನ್ನು ಬಹಿಷ್ಕರಿಸುವುದಾಗಿ ಹೇಳುತ್ತ ಸಾಗಿದ ವಿಪಕ್ಷಗಳು ಮತ್ತು ಸದನಕ್ಕೆ ಹಿಂದುರುಗಲೇ ಇಲ್ಲ.
ಬಿಜೆಪಿ ಸರಕಾರ ಭಾಗಿಯಾಗಿರುವ ಎಲ್ಲ ಹಗರಣಗಳ ಕುರಿತು ಮುಕ್ತ ಚರ್ಚೆಯಾಗಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಗೆ ಇಂದು ಕೂಡ ಸ್ಪೀಕರ್ ಕೆಜಿ ಬೋಪಯ್ಯ ಸೊಪ್ಪು ಹಾಕಲಿಲ್ಲ. ಚರ್ಚೆಗೆ ಅವಕಾಶ ನೀಡದ್ದನ್ನು ವಿರೋಧಿಸಿ ವಿರೋಧ ಪಕ್ಷದವರು ಸಭಾತ್ಯಾಗ ಮಾಡಿದರು. ಬಂಧುಬಾಂಧವರಿಗೆಲ್ಲ ನಿವೇಶನಗಳನ್ನು ಹಂಚಿ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿರುವ ಯಡಿಯೂರಪ್ಪ ಅವರ ವಿರುದ್ಧ ವಿರೋಧ ಪಕ್ಷಗಳು ಕತ್ತಿಹಿರಿದು ನಿಂತಿವೆ. ಈ ಹಗರಣಗಳ ಕುರಿತು ಚರ್ಚೆಗೆ ಅವಕಾಶ ನೀಡದಿದ್ದರೆ ಕಲಾಪ ನಡೆಸಲೂ ಅವಕಾಶ ನೀಡುವುದಿಲ್ಲ ಎಂಬ ಏಕಧ್ವನಿಗೆ ಕಟ್ಟುಬಿದ್ದಿವೆ.
ಚರ್ಚೆಗೆ ಅವಕಾಶ ನೀಡದ್ದಕ್ಕೆ ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ, ಸಂಸದ ಎಚ್ ಡಿ ಕುಮಾರಸ್ವಾಮಿ ಅವರು, ಹಕ್ಕುಬಾಧ್ಯತಾ ಸಮಿತಿಗೆ ವಿರೋಧಿಗಳ ಅಹವಾಲು ಸಲ್ಲಿಸಲು ಅವಕಾಶ ನೀಡಿದ್ದಕ್ಕೆ ಸ್ಪೀಕರ್ ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ. ಸೂಕ್ತ ಸಮಯದಲ್ಲಿ ಎಲ್ಲ ಭ್ರಷ್ಟಾಚಾರಗಳನ್ನು ಬಯಲಿಗೆಳೆಯಲಿದ್ದೇನೆ ಎಂದು ಅವರು ನುಡಿದಿದ್ದಾರೆ. [ಜಂಟಿ ಅಧಿವೇಶನ]