ವಾಹ್! ಎಚ್ಚರವಿದ್ದಾಗಲೇ ಬುರುಡೆ ಬಿಚ್ಚಿ ಶಸ್ತ್ರಚಿಕಿತ್ಸೆ
ತಮ್ಮ ಆಸ್ಪತ್ರೆಯ ಸಾಧನೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ನರರೋಗ ಶಸ್ತ್ರಚಿಕಿತ್ಸಾ ತಜ್ಞ ಹಾಗೂ ಈ ಶಸ್ತ್ರಚಿಕಿತ್ಸೆಯ ರೂವಾರಿ ಡಾ. ಸತೀಶ್ ರುದ್ರಪ್ಪ ಮಾತನಾಡಿ, ಇಂತಹದೊಂದು ಸೂಕ್ಷ್ಮ ಹಾಗೂ ಅಪರೂಪದ ಚಿಕಿತ್ಸೆ ಯಶಸ್ವಿಯಾಗಲು ರೋಗಿ ಚೇತನ್ ಅವರ ಧೈರ್ಯವೇ ಕಾರಣ. ಎಚ್ಚರದಲ್ಲಿರುವಾಗಲೇ ಮೆದುಳಿನ ಶಸ್ತ್ರಚಕಿತ್ಸೆ ನಡೆಸುತ್ತೇವೆ ಎಂದರೆ ಯಾರೂ ಒಪ್ಪುವುದಿಲ್ಲ. ಎಂದರು.
ತೀವ್ರ ತಲೆನೋವಿನಿಂದ ಬಳಲುತಿದ್ದ ಚೇತನ್ (ಮದುವೆಯಾಗಿ ಅರು ತಿಂಗಳುಗಳಾಗಿದೆ) ಅವರನ್ನು ಪರೀಕ್ಷಿಸಿದಾಗ ಮೆದುಳಿನ ಬಲಭಾಗದಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು. ಈ ಭಾಗವು ಮುಖ ಹಾಗೂ ಎಡಗೈನ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಈ ಗಡ್ಡೆಯನ್ನು ತೆಗೆಯದಿದ್ದರೆ ಮುಂದೆ ದೇಹದ ಎಡಭಾಗಕ್ಕೆ ಲಕ್ವಾ ಹೊಡೆಯುವ ಸಂಭವ ಇತ್ತು. ಇದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ಶಸ್ತ್ರಚಿಕಿತ್ಸೆಗೆ ಸಿದ್ಧಗೊಳಿಸಿದೆವು ಎಂದು ವಿವರಿಸಿದರು.
ವಿರಳ ಶಸ್ತ್ರಚಿಕಿತ್ಸೆ: ಅತ್ಯಂತ ವಿರಳವಾದ ಪ್ರಜ್ಞಾಸ್ಥಿತಿಯಲ್ಲಿಯೇ ಮೆದುಳಿನ ಶಸ್ತ್ರಚಿಕಿತ್ಸೆ(ಅವೇಕ್ ಕ್ರೇನಿಯೋಟೊಮಿ)ಯನ್ನು ಜ. 5ರಂದು ನಡೆಸಲಾಗಿದೆ. ಸ್ಥಳೀಯ ಅರಿವಳಿಕೆ ನೀಡಿ, ತಲೆ ಬುರುಡೆಯನ್ನು ತೆರೆದು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಸುಮಾರು ಒಂದೂವರೆ ಗಂಟೆವರೆಗೆ ನಡೆದ ಈ ಕ್ರಿಯೆಯಲ್ಲಿ ರೋಗಿಯ ಜೊತೆ ನಿರಂತರವಾಗಿ ಮಾತುಕತೆ ನಡೆಸಲಾಯಿತು.
ಪ್ರಯೋಜನ: ರೋಗಿಯನ್ನು ಪ್ರಜ್ಞಾಹೀನಗೊಳಿಸಿ ಶಸ್ತ್ರಚಿಕಿತ್ಸೆ ಮಾಡುವುದಕ್ಕಿಂತ ಇಲ್ಲಿ ಕಡಿಮೆ ವೆಚ್ಚ ತಗಲುತ್ತದೆ. ಅಲ್ಲದೇ, ರೋಗಿ ಬಹಳ ಬೇಗನೇ (2-3 ದಿನಗಳ ನಂತರ) ಮನೆಗೆ ಹೋಗಬಹುದು. ಈ ಚಿಕಿತ್ಸಾ ಮಾದರಿಯನ್ನು ಎಲ್ಲ ಪ್ರಕರಣಗಳಲ್ಲಿ ಪರಿಗಣಿಸಲು ಸಾಧ್ಯವಿಲ್ಲ. ಇದಕ್ಕಾಗಿ ಸಾಕಷ್ಟು ನುರಿತ ನರರೋಗ ಶಸ್ತ್ರಚಿಕಿತ್ಸಾ ತಜ್ಞರು ಇರಬೇಕು ಹಾಗೂ ರೋಗಿಯು ಧೈರ್ಯಶಾಲಿಯಾಗಿರಬೇಕು ಎಂದು ವೈದ್ಯಕೀಯ ನಿರ್ದೇಶಕ ಸುದರ್ಶನ ಬಲ್ಲಾಳ್ ಹೇಳಿದರು.
ಕತ್ತರಿಸುವ ಭಾಗದಲ್ಲಿ ಸ್ಥಳೀಯ ಅರಿವಳಿಕೆ ಮದ್ದು ನೀಡಿದ್ದರಿಂದ ನೋವು ಅನ್ನಿಸಲಿಲ್ಲ. ವೈದ್ಯರು ಕೇಳುವ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಿದೆ. ಅವರು ಹೇಳಿದಂತೆ ಕೈ, ಕಾಲು ಅಲುಗಾಡಿಸಿದೆ. ಇಡೀ ಪ್ರಕ್ರಿಯೆ ಮುಗಿಯುವವರೆಗೂ ನಾನು ಎಚ್ಚರವಾಗಿಯೇ ಇದ್ದೆ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಚೇತನ್ ಹೇಳುತ್ತಾರೆ. [ಶಸ್ತ್ರಚಿಕಿತ್ಸೆ]