ಹೊನ್ನಾವರ: ಶಿಕ್ಷೆಗೆ ವಿದ್ಯಾರ್ಥಿ ಬಲಿ; ಇಬ್ಬರ ಸೆರೆ
ಹೊನ್ನಾವರದ ನ್ಯೂ ಇಂಗ್ಲಿಷ್ ಅನುದಾನಿತ ಪ್ರೌಢ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಮುಹಮ್ಮದ್ ಅಫ್ಜಲ್ ಹಮ್ಜಾ ಎಂಬ ವಿದ್ಯಾರ್ಥಿಯು ಕಳೆದೆರಡು ದಿನಗಳಿಂದ ಮನೆಯಲ್ಲಿ ಯಾವುದೋ ಕಾರ್ಯಕ್ರಮ ಇದ್ದುದರಿಂದಾಗಿ ಗೈರು ಹಾಜರಾಗಿದ್ದು, ಎಂದಿನಂತೆ ಇಂದು ಬೆಳಗ್ಗೆ ಶಾಲೆಗೆ ಹೋಗಿದ್ದ. ಶಾಲೆಯ ಮುಖ್ಯೋಪಾಧ್ಯಯ ಎಸ್.ಟಿ.ಹೆಬ್ಬಾರ್, ವಿದ್ಯಾರ್ಥಿಯು ಗೈರು ಹಾಜರಾಗಿದ್ದುದರಿಂದ ಶಿಕ್ಷೆಯನ್ನು ನೀಡುವಂತೆ ದೈಹಿಕ ಶಿಕ್ಷಣ ಶಿಕ್ಷಕ ಕೆ.ಡಿ.ನಾಯ್ಕರಿಗೆ ಹೇಳಿದ್ದರು.
ಅವರು ಶಾಲೆಯ ಮೈದಾನದಲ್ಲಿ ನಾಲ್ಕು ಸುತ್ತು ಓಡುವಂತೆ ವಿದ್ಯಾರ್ಥಿಗೆ ಆದೇಶಿಸಿದರು ಎನ್ನಲಾಗಿದೆ. ವಿದ್ಯಾರ್ಥಿ ಮೂರು ಸುತ್ತು ಓಡಿ ಸುಸ್ತಾಗಿ, ನನಗೆ ಉಸಿರು ಕಟ್ಟಿದಂತಾಗುತ್ತದೆ ಎಂದು ಶಿಕ್ಷಕರಲ್ಲಿ ಬೇಡಿಕೊಂಡರೂ "ಸುಮ್ಮನೆ ನಾಟಕ ಮಾಡಬೇಡ ಶಿಕ್ಷೆ ಅನುಭವಿಸು ಎಂದು ಪಟಾರನೆ ಕೆನ್ನೆಗೆ ಹೊಡೆದಿದ್ದಾರೆ. ಶಿಕ್ಷಕನ ಹೊಡೆತವನ್ನು ತಾಳಲಾರದೆ ವಿದ್ಯಾರ್ಥಿಯು ಸ್ಥಳದಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ ಎನ್ನಲಾಗಿದೆ. [ವಿದ್ಯಾರ್ಥಿ]
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಶಾಲೆಗೆ ಮುತ್ತಿಗೆ ಹಾಕಿ ಶಾಲೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಜನರನ್ನು ಚದುರಿಸಲು ಪೋಲಿಸರು ಲಾಠಿ ಪ್ರಹಾರ ನಡೆಸಿದ್ದು, ಈ ಲಾಠಿ ಪ್ರಹಾರದಲ್ಲಿ ನಾಲ್ಕು ಮಂದಿಗೆ ಗಾಯಗಳಾಗಿವೆ.
ಪರಿಹಾರ: ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿಯಿಂದ ವಿದ್ಯಾರ್ಥಿಯ ಪಾಲಕರಿಗೆ 25 ಸಾವಿರ ರೂ ಪರಿಹಾರವನ್ನು ಇಲಾಖೆ ಘೋಷಿಸಿದೆ ಎಂದರು. ನ್ಯೂ ಇಂಗ್ಲಿಷ್ ಶಾಲೆಯ ಆಡಳಿತ ಮಂಡಳಿಯು ವಿದ್ಯಾರ್ಥಿಯ ಸಾವಿಗೆ ದುಖಃವನ್ನು ವ್ಯಕ್ತಪಡಿಸುತ್ತ ಪಾಲಕರಿಗೆ ಒಂದು ಲಕ್ಷ ರೂ ಪರಿಹಾರವನ್ನು ನೀಡುವುದಾಗಿ ಘೋಷಿಸಿದೆ.
ಆದರೆ, ವಿದ್ಯಾರ್ಥಿ ಸಾವಿಗೆ ಕಾರಣರಾದ ಶಿಕ್ಷಕರಿಗೆ ಕಠಿಣ ಶಿಕ್ಷೆ ನೀಡಬೇಕು. ಪರಿಹಾರ ಧನ ತೆಗೆದುಕೊಂಡು ನಾವೇನು ಮಾಡುವುದು, ಇನ್ಮುಂದೆ ಯಾವುದೇ ಮಕ್ಕಳಿಗೂ ಈ ರೀತಿ ದುರಂತ ಸಾವು ಬರಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.