ಓಬಳಾಪುರಂ ಗ್ರಾಮದಲ್ಲಿ ಸಿಬಿಐ ಬೂಟುಗಳ ಸದ್ದು
ಅಧಿಕೃತ ಮೂಲಗಳ ಪ್ರಕಾರ, ಆಂಧ್ರ ಸರ್ಕಾರ ಓಬಳಾಪುರಂ ಗ್ರಾಮ ವ್ಯಾಪ್ತಿಯ ಆರು ಗಣಿಗಳ ವ್ಯವಹಾರಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿರುವ ಹಿನ್ನಲೆಯಲ್ಲಿ ಈ ತಂಡ ಗಣಿಗಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಅಗತ್ಯ ಬಿಗಿ ಬಂದೋಬಸ್ತ್ ಭದ್ರತೆಯನ್ನು ಒದಗಿಸಲು ಪೊಲೀಸರಿಗೆ ಸಂದೇಶ ರವಾನೆ ಆಗಿದೆ.
ತನಿಖೆಗೆ ಓಕೆ ಅಂದ ಸುಪ್ರೀಂ: ಸಿಬಿಐ ತನಿಖೆ ಮುಂದುವರೆಸದಂತೆ ಓಎಂಸಿ ಗಣಿ ಕಂಪನಿ ಆಂಧ್ರ ಹೈಕೋರ್ಟ್ನಲ್ಲಿ ಪಡೆದಿದ್ದ ತಡೆಯಾಜ್ಞೆ ಇತ್ತೀಚೆಗೆ ತೆರವಾಗಿದ್ದು, ತನಿಖೆ ಚುರುಕಿನಿಂದ ನಡೆದಿದೆ. ಅಲ್ಲದೇ, ಇದೇ ಆರು ಗಣಿಗಳ ಕುರಿತು ಸುಪ್ರೀಂಕೋರ್ಟ್ನ ಕೇಂದ್ರೀಯ ಉನ್ನತಾಧಿಕಾರ ಸಮಿತಿ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಿದೆ.
ಸಿಇಸಿಯ ವರದಿಯ ಹಿನ್ನಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಗದ್ದಲ ನಡೆದಿದೆ. ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷಗಳ ಮಧ್ಯೆ ರಾಜಕೀಯ ತಿಕ್ಕಾಟವೆ ನಡೆದಿದೆ. ಈ ಹಿನ್ನಲೆಯಲ್ಲಿ ಸಿಬಿಐ ಅಧಿಕಾರಿಗಳ ತಂಡ ಜನವರಿ 11 ಮತ್ತು 12 ರಂದು ಗಣಿ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದು ರಾಜಕೀಯವಾಗಿ ಕುತೂಹಲ ಕೆರಳಿಸಿದೆ.
ಸಿಬಿಐ ಅಧಿಕಾರಿಗಳು ಗಣಿಗಳಿಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಸಂಬಂಧಿಸಿದ ಗಣಿ ಉದ್ಯಮಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಅಗತ್ಯ ಮಾಹಿತಿ ನೀಡಲಿದ್ದಾರೆ. [ಅಕ್ರಮ ಗಣಿಗಾರಿಕೆ]