ಗಂಗೂಲಿ ತಂಡದ ಭಾಗ : ಶಾರೂಕ್ ಖಾನ್
ಬೆಂಗಳೂರಿನಲ್ಲಿ ನಡೆದ ಐಪಿಎಲ್ 4ರ ಹರಾಜು ಪ್ರಕ್ರಿಯೆಯಲ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಯಾವ ತಂಡವೂ ಖರೀದಿಸಿಲ್ಲ. ಇದನ್ನು ವಿರೋಧಿಸಿ ಕೊಲ್ಕತ್ತಾದಲ್ಲಿ ಗಂಗೂಲಿ ಅಭಿಮಾನಿಗಳು ಪ್ರತಿಭಟನೆ ನಡೆಸಿ ಶಾರೂಕ್ ಖಾನ್ ಅವರ ಪ್ರತಿಕೃತಿಯನ್ನು ದಹಿಸಿದ್ದರು. ತಕ್ಷಣ ಎಚ್ಚತ್ತುಕೊಂಡ ಶಾರೂಕ್ ಇಂದು ಈ ಹೇಳಿಕೆಯನ್ನು ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೌರವ್ ಗಂಗೂಲಿ ಇಲ್ಲದೇ ನೈಟ್ ರೈಡರ್ಸ್ ಕಣಕ್ಕೆ ಇಳಿಯುವುದಿಲ್ಲ. ಈ ಸಾರಿ ಅವರು ಆಟಗಾರರಾಗಿ ಕಣಕ್ಕೆ ಇಳಿಯುವುದಿಲ್ಲ. ಬದಲಾಗಿ ತಂಡದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಬಗ್ಗೆ ಕೂಡಲೇ ನಾನು ಗಂಗೂಲಿ ಜೊತೆ ಚರ್ಚೆ ಮಾಡುವೆ ಎಂದು ಶಾರೂಕ್ ವಿವರಿಸಿದ್ದಾರೆ.
ಐಪಿಎಲ್ 4ಗೆ ಬೆಂಗಳೂರಿನಲ್ಲಿ ಎರಡು ದಿನ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಎಲ್ಲ ಫ್ರಾಂಚೈಸಿಗಳು ಯುವ ಆಟಗಾರರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿವೆ. ಹಿರಿಯ ಆಟಗಾರ ಪೈಕಿ ಸೌರವ್ ಗಂಗೂಲಿ, ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ, ಶ್ರೀಲಂಕಾದ ಸನತ್ ಜಯಸೂರ್ಯ ಹಾಗೂ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಅವರನ್ನು ಯಾವ ಫ್ರಾಂಚೈಸಿಗಳು ಖರೀದಿಸಿದೆ ಕ್ರಿಕೆಟ್ ಪ್ರೇಮಿಗಳಿಗೆ ನಿರಾಶೆ ಮೂಡಿಸಿತ್ತು.(ಶಾರೂಕ್ ಖಾನ್)