ಸಿಇಸಿ ಟೀಕೆ ನ್ಯಾಯಾಂಗಕ್ಕೆ ಮಾಡಿದ ನಿಂದನೆ
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಸಿಇಸಿಯನ್ನು ರಚಿಸಿದೆ. ಸಿಇಸಿಗೆ ನ್ಯಾಯಿಕ ಸಮಾನ ಅಧಿಕಾರ ಇದೆ. ಜಿ. ಜನಾರ್ದನ ರೆಡ್ಡಿ ಅವರು ಸಿಇಸಿ ಮತ್ತು ಸಿಇಸಿ ತಂಡದ ಸದಸ್ಯರ ಕುರಿತು ಮಾತನಾಡಿದ್ದು ತಪ್ಪು ಎಂದು ಹೇಳಿದರು.
ಜನಾರ್ದನ ರೆಡ್ಡಿ ಅವರೇ ಹೇಳಿದಂತೆ, ವೈಎಸ್ಆರ್ ನಿಧನಾನಂತರವೇ ಅವರ ಗಣಿ ಚಟುವಟಿಕೆಗಳ ಅಕ್ರಮಗಳು ಬಯಲಾಗುತ್ತಿವೆ. ವೈಎಸ್ಆರ್ ಮತ್ತು ಜನಾರ್ದನ ರೆಡ್ಡಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಅಧಿಕಾರಿಗಳ ಮೇಲೆ ಒತ್ತಡ ಹೇರಿ ತಮ್ಮ ಇಷ್ಟದಂತೆ ಗಣಿ ಗುತ್ತಿಗೆಗಳನ್ನು, ಗಣಿ ನಕ್ಷೆಗಳನ್ನು ಬದಲಾವಣೆ ಮಾಡಿದ್ದಾರೆ ಎಂದು ಹೇಳಿದರು.
ವೈಎಸ್ಆರ್ ಅವರು ಜೀವಂತವಾಗಿ ಇರುವವರೆಗೂ ಕೂಡ ಓಎಂಸಿ ಮತ್ತು ಅದರ ಅಂಗಸಂಸ್ಥೆಗಳ ಅಕ್ರಮ ಚಟುವಟಿಕೆಗಳು ಅಧಿಕಾರದ ಆಶ್ರಯದಲ್ಲಿ ಮುಚ್ಚಿಹೋಗಿದ್ದವು. ಈ ವಿಷಯನ್ನು ಸಚಿವ ಜನಾರ್ದನ ರೆಡ್ಡಿ ಅವರೇ ಒಪ್ಪಿಕೊಂಡಂತೆ ಆಗಿದೆ. ಕಾರಣ ಅವರು ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಹಾಸ್ಯಾಸ್ಪದ : ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ ಅವರು ಓಎಂಸಿಗೂ ತಮಗೂ ಸಂಬಂಧವೇ ಇಲ್ಲ ಎಂದು ಹೇಳಿರುವುದು ಹಾಸ್ಯಾಸ್ಪದ. ಓಎಂಸಿ ಮತ್ತು ಇತರೆ ವ್ಯವಹಾರಗಳಲ್ಲಿ ಕೌಟುಂಬಿಕ ಪಾಲುದಾರ ಸದಸ್ಯ ಮತ್ತು ನಿರ್ದೇಶಕರಾಗಿರುವ ಜಿ. ಕರುಣಾಕರ ರೆಡ್ಡಿ ಅವರು ಅಧಿಕಾರ ಹೋಗುತ್ತದೆ ಎನ್ನುವ ಭಯದಿಂದ ಈ ರೀತಿಯ ಹೇಳಿಕೆ ನೀಡುತ್ತಿರುವುದು ಸತ್ಯಾಂಶವನ್ನು ತಿಳಿಯಲು ನೆರವಾಗುತ್ತದೆ ಎಂದರು.
ಅಕ್ರಮ - ಅನಧಿಕೃತ : 2000ರ ಪೂರ್ವದಲ್ಲಿ ರಾಜ್ಯದಲ್ಲಿ ಅಥವಾ ಜಿಲ್ಲೆಯಲ್ಲಿ ಅಕ್ರಮ - ಅನಧಿಕೃತ ಗಣಿಗಾರಿಕೆಯೇ ಇರಲಿಲ್ಲ. ಸಚಿವ ಜನಾರ್ದನ ರೆಡ್ಡಿ ಮತ್ತು ಅವರ ಹಿಂಬಾಲಕರಿಂದಲೇ ಓಬಳಾಪುರಂ, ಸಂಡೂರು, ಬಳ್ಳಾರಿ ಮತ್ತು ಹೊಸಪೇಟೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮ - ಅನಧಿಕೃತ ಗಣಿಗಾರಿಕೆ ಪ್ರಾರಂಭ ಆಗಿದೆ. ಇದು ನೈಜ ಗಣಿ ಉದ್ಯಮಿಗಳಿಗೆ ಅವಮಾನಿಸುತ್ತಿದೆ ಎಂದು ಟಪಾಲ್ ಗಣೇಶ್ ಹೇಳಿದರು.