ಈರುಳ್ಳಿ ದಾಸ್ತಾನುದಾರರ ಮೇಲೆ ಐಟಿ ದಾಳಿ
ದುರಾಸೆಯಿಂದಾಗಿ ಈರುಳ್ಳಿ ಬೆಳೆಯನ್ನು ಮಾರುಕಟ್ಟೆಗೆ ಬಿಡದೆ ಗೋದಾಮುಗಳಲ್ಲೇ ಇಟ್ಟುಕೊಂಡು ತೆರಿಗೆ ಆದಾಯವನ್ನೂ ತಪ್ಪಿಸುತ್ತಿರುವವರ ಮೇಲೆ ದಾಳಿ ಮಾಡಲಾಗಿದೆ. ಬಿಹಾರ ಮತ್ತು ಜಾರ್ಖಂಡಿ ರಾಜ್ಯಗಳ 12 ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ಸೂರತ್ ನಲ್ಲಿ ಕೂಡ ಈರುಳ್ಳಿ ದಾಸ್ತಾನುದಾರರು ದಾಳಿಯ ಬಿಸಿಯನ್ನು ಎದುರಿಸಬೇಕಾಯಿತು.
ಕರ್ನಾಟಕ ಸೇರಿದಂತೆ ದೇಶದ ಎಲ್ಲೆಡೆಯಲ್ಲಿ ಈರುಳ್ಳಿ ಬೆಲೆ ಗಗನಮುಖಿಯಾಗಿದೆ. ಉತ್ತಮ ಗುಣಮಟ್ಟದ ಈರುಳ್ಳಿ 80ರಿಂದ 90 ರು.ಗೆ ಮಾರಾಟವಾಗುತ್ತಿವೆ. ಈರುಳ್ಳಿ ಮತ್ತಿತರ ತರಕಾರಿಗಳ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದರಿಂದ ಆಹಾರ ಹಣದುಬ್ಬರ ಶೇ.18 ದಾಟಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಭಾರೀ ತಲೆನೋವು ತಂದಿವೆ. ರಾಜ್ಯ ಸರಕಾರಗಳು ಕೂಡ ಬೆಲೆಯನ್ನು ಹದ್ದುಬಸ್ತಿನಲ್ಲಿಡಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಹಕರು ಆರೋಪಿಸುತ್ತಿದ್ದಾರೆ.
ಆದರೆ, ದಾಸ್ತಾನುದಾರರ ಹೇಳಿಕೆ ವ್ಯತಿರಿಕ್ತವಾಗಿದೆ. ಬೆಳೆಯಲ್ಲಿ ಹೊಡೆತ ಬಿದ್ದಿದ್ದರಿಂದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಬೆಲೆ ಏರಿಕೆಯಲ್ಲಿ ತಮ್ಮ ಕೈವಾಡವೇನೂ ಇಲ್ಲ ಎಂದು ವಾದ ಮಾಡುತ್ತಿದ್ದಾರೆ. ಗೋದಾಮುಗಳಲ್ಲಿ ಕೂಡಿಟ್ಟಿರುವುದರಿಂದ ಕೊಳೆಯುತ್ತಿರುವ ಈರುಳ್ಳಿಗಳೇ ಮಾರುಕಟ್ಟೆಗೆ ಬರುತ್ತಿದ್ದು, ಅವನ್ನೇ ಕೊಳ್ಳದೆ ಗ್ರಾಹಕರಿಗೆ ಬೇರೆ ವಿಧಿಯಿಲ್ಲದಂತಾಗಿದೆ. ಕರ್ನಾಟಕ ಸರಕಾರ ಕೂಡ ಕ್ರಮ ಕೈಗೊಳ್ಳುವುದೆ?