ಹಸೀನಾ ಕಥೆಗಾರ್ತಿ ಬಾನುಗೆ ಸರೋಜಾದೇವಿ ಪ್ರಶಸ್ತಿ
2010-11ನೇ ಸಾಲಿಗೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಕಳೆದ ಡಿಸೆಂಬರ್ 27ರಂದು ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಸುದ್ದಿಯನ್ನು ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹಾಸನ ಜಿಲ್ಲೆಯವರಾದ ಬಾನು ಮುಷ್ತಾಕ್ ಹಾಸನ ಜಿಲ್ಲೆ ನಗರಸಭಾ ಸದಸ್ಯೆಯಾಗಿ, ಬೆಂಗಳೂರಿನ ಆಕಾಶವಾಣಿಯಲ್ಲಿ ಸಲಹಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಹಲವಾರು ಕಥಾ ಸಂಕಲಗಳು, ಕಾದಂಬರಿಗಳು ಪ್ರಕಟವಾಗಿರುತ್ತವೆ. ವೃತ್ತಿಯಲ್ಲಿ ನ್ಯಾಯವಾದಿಗಳಾಗಿ ಕೆಲಸ ನಿರ್ವಹಿಸುತ್ತಿದ್ದು, ಲಂಕೇಶ್ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರರಾಗಿ ಕೆಲಸ ನಿರ್ವಹಿಸಿರುತ್ತಾರೆ.
ಇವರ ಸಣ್ಣಕಥೆ 'ಹಸಿನಾ' ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಹಸೀನಾ ಪಾತ್ರದಲ್ಲಿ ನಟಿ ತಾರಾ ಅದ್ಭುತವಾಗಿ ನಟಿಸಿದ್ದರು. ಈ ಪಾತ್ರದ ಮನೋಜ್ಞ ಅಭಿನಯಕ್ಕಾಗಿ ತಾರಾಗೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯೂ ಲಭಿಸಿತ್ತು.
"ವಿಮೆನ್ ಪಾರ್ ರೇಡಿಯೋ ಅಂಡ್ ಟೆಲಿವಿಶನ್ ಬಹುಮಾನ ಮತ್ತು ಕರ್ನಾಟಕ ಲೇಖಕಿಯರ ಸಂಘದಿಂದ ಉದಯೋನ್ಮುಖ ಕವಯತ್ರಿ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ ದೊರೆತಿದೆ. ಇದೀಗ ಪದ್ಮಭೂಷಣ ಡಾ ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದು, ರೂ 10,000/- ನಗದು ಮತ್ತು ಪ್ರಶಸ್ತಿ ಫಲಕದೊಂದಿಗೆ ಸನ್ಮಾನಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿದೆ.