ದತ್ತು ಪಡೆದ ಕ್ಷೇತ್ರ ಕಳಕೊಂಡ ಯಡಿಯೂರಪ್ಪ
ಭೂ ಹಗರಣಗಳಲ್ಲಿ ಮುಳುಗಿರುವ ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಮಿಶ್ರ ಫಲ ಉಂಡಿದ್ದಾರೆ. ತಾಲೂಕು ಪಂಚಾಯತಿ ವಿಷಯಕ್ಕೆ ಬಂದರೆ ಸಾಗರ, ಭದ್ರಾವತಿ, ತೀರ್ಥಹಳ್ಳಿ ತಾಲೂಕುಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಶಿಕಾರಿಪುರದಲ್ಲೂ ಅಲ್ಪ ಸಾಧನೆ ಮಾಡಿದ ತೃಪ್ತಿ ಹೊಂದಿದೆ.
ಈಸೂರು ಕಳೆದುಕೊಂಡ ಸಿಎಂ: ಶಿಕಾರಿಪುರದಲ್ಲಿ ಒಟ್ಟು 5 ಜಿ.ಪಂ. ಕ್ಷೇತ್ರಗಳಿವೆ. ಬಿಜೆಪಿ ನಾಲ್ಕು ಹಾಗೂ ಕಾಂಗ್ರೆಸ್ 1 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಕಳೆದ ಬಾರಿ ಎಲ್ಲ ಜಿ.ಪಂ. ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಆದರೆ ಈ ಬಾರಿ ಈಸೂರು ಕ್ಷೇತ್ರ ಬಿಜೆಪಿಗೆ ಕೈಕೊಟ್ಟಿದ್ದು, ಕಾಂಗ್ರೆಸ್ ಅಭ್ಯರ್ಥಿ ಈಸೂರು ಬಸವರಾಜ್ಗೆ ಒಲಿದಿದೆ. ಈ ಕ್ಷೇತ್ರ ವ್ಯಾಪ್ತಿಯ ಹಿತ್ತಲ, ಗಾಮ ಹಾಗೂ ಈಸೂರು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಸಿಎಂ ಕ್ರಮ ಕೈಗೊಂಡಿದ್ದರು.
ಈ ಕ್ಷೇತ್ರವನ್ನು ಸರ್ಕಾರ ದತ್ತು ಪಡೆದಿತ್ತು. ಆದರೆ ಈ ಕ್ಷೇತ್ರದಲ್ಲಿಯೇ ಬಿಜೆಪಿ ಹಿನ್ನಡೆ ಸಾಧಿಸಿರುವುದು ಆ ಪಕ್ಷದ ಕಾರ್ಯಕರ್ತರಲ್ಲಿಯೇ ಆಶ್ಚರ್ಯ ಮೂಡಿಸಿದೆ. ಇನ್ನುಳಿದಂತೆ ಹೊಸೂರು ಕ್ಷೇತ್ರದಲ್ಲಿ ಶಾಂತಮ್ಮ ಪ್ರೇಂಕುಮಾರ್, ತೊಗರ್ಸಿಯಲ್ಲಿ ಮಂಜಪ್ಪ ತಡಗಣಿ, ಕಪ್ಪನಹಳ್ಳಿಯಲ್ಲಿ ಬಂಗಾರಿನಾಯ್ಕಿ, ಸುಣ್ಣದಕೊಪ್ಪದಲ್ಲಿ ಈಶ್ವರಪ್ಪ ಬಿಜೆಪಿಯ ವಿಜಯಿ ಅಭ್ಯರ್ಥಿಗಳಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಶಿಕಾರಿಪುರದ 17 ತಾಲೂಕು ಪಂಚಾಯತ್ ಕ್ಷೇತ್ರಗಳು ಬಿಜೆಪಿ ಅಭ್ಯರ್ಥಿಗಳ ಪಾಲಾಗಿತ್ತು. ಆದರೆ ಈ ಬಾರಿ ಬಿಜೆಪಿ ಪಕ್ಷ ಐದು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಹಿತ್ತಲ, ಸಾಲೂರು, ಕಪ್ಪನಹಳ್ಳಿ, ಮತ್ತಿಕೋಟೆ ಹಾಗೂ ಚಿಕ್ಕಜಂಬೂರು ತಾ.ಪಂ.ಗಳಲ್ಲಿ ಕಾಂಗ್ರೆಸ್ ಗೆದ್ದಿದೆ.
ಎಲ್ಲ ಕ್ಷೇತ್ರಗಳಲ್ಲಿಯೂ ವಿಜಯ ಸಾಧಿಸುವ ಕನಸು ಕಾಣುತ್ತಿದ್ದ ಬಿಜೆಪಿಗೆ, ಕಾಂಗ್ರೆಸ್ ಪಕ್ಷ ಅಡ್ಡಿಯಾಗಿದೆ. ಶಿಕಾರಿಪುರ ತಾಲೂಕಿನಲ್ಲಿ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ ಕೆಲ ಸ್ಥಾನಗಳಲ್ಲಿ ಸೋಲನ್ನನುಭವಿಸಿರುವುದು ಬಿಜೆಪಿ ಕಾರ್ಯ ಕರ್ತರಲ್ಲಿ ನಿರಾಸೆ ಮೂಡಿಸಿದೆ.
ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿ ಒಳಜಗಳ ಆಡುತ್ತಿರುವ ನಾಯಕರಿಗೆ ಜನತೆ ಸರಿಯಾದ ಪಾಠ ಕಲಿಸಿದ್ದಾರೆ. ಶಿಕಾರಿಪುರಕ್ಕೆ ಬೇಕಾಬಿಟ್ಟಿ ಅನುದಾನ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಿದ್ದರೂ ಜನರು ಕೈ ಎತ್ತಿರುವುದು ಯಾಕೆ ಎಂಬುದು ಯಡಿಯೂರಪ್ಪ ಅವರನ್ನು ಕಾಡುತ್ತಿದೆ. [ಜಿಲ್ಲಾ ಪಂಚಾಯತಿ ಚುನಾವಣೆ]