ಗಣಿ ರೆಡ್ಡಿಗಳ ಪ್ರಭಾವ ಕ್ರಮೇಣ ಕುಗ್ಗುತ್ತಿದೆ
ಜಿ. ಜನಾರ್ದನರೆಡ್ಡಿಯೇ ರಾಜಕೀಯವಾಗಿ ಮುಖ್ಯವಾದ ಕೇಂದ್ರಬಿಂದು. ಜಿ. ಜನಾರ್ದನರೆಡ್ಡಿ ಜೊತೆಗಿನ ಸ್ನೇಹದಿಂದಾಗಿ ಬಿ. ಶ್ರೀರಾಮುಲು ರಾಜಕೀಯ ಅಧಿಕಾರ, ಗೌರವ ಪಡೆದಿರುವುದು. ಈ ವಿಷಯಕ್ಕೆ ಮತ್ತೊಂದು ಸೇರ್ಪಡೆ ಸಂಸದೆ ಜೆ. ಶಾಂತ.
1999 ರಲ್ಲಿ ರೆಡ್ಡಿ ಸಹೋದರರ ಪ್ರತಿನಿಧಿಯಾಗಿ ಬಿ. ಶ್ರೀರಾಮುಲು ಬಳ್ಳಾರಿ ನಗರ ವಿಧಾನಸಭೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾಗ ಸೋಲುಕಂಡರು. ನಂತರ ನಡೆದ ಬಳ್ಳಾರಿ ಮಹಾನಗರ ಪಾಲಿಕೆ, ಜಿಲ್ಲಾ - ತಾಲೂಕು ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಕ್ರಮೇಣ ಹಂತ ಹಂತವಾಗಿ ಗೆಲುವು ಸಾಧಿಸಿ ಜೈತ್ರಯಾತ್ರೆ ಪ್ರಾರಂಭಿಸಿತ್ತು.
2005 ರ ವಿಧಾನಸಭಾ ಚುನಾವಣೆಯಲ್ಲಿ ಬಿ. ಶ್ರೀರಾಮುಲು, ಅನಿಲ್ ಎಚ್. ಲಾಡ್ (ಹಾಲಿ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ) ಮತ್ತು ಸಿರುಗುಪ್ಪ ವಿಧಾಸಭೆಯ ಎಂ.ಎಸ್. ಸೋಮಲಿಂಗಪ್ಪ ಶಾಸಕರಾಗಿ ಆಯ್ಕೆ ಆಗಿದ್ದರು. ಇದೇ ಹುಮ್ಮಸ್ಸಿನಲ್ಲಿ ಜಿ. ಜನಾರ್ದನರೆಡ್ಡಿ ಅವರು ಕೂಡ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ ಆದರು.
ನಂತರ ನಡೆದ ಜಿಲ್ಲಾ - ತಾಲೂಕು ಮತ್ತು ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಕ್ರಮೇಣ ಗೆಲುವು ಸಾಧಿಸುತ್ತಾ ರೆಡ್ಡಿಗಳ ರಾಜಕೀಯ ಪ್ರಭಾವ - ವರ್ಚಸ್ಸು ಹೆಚ್ಚಿತ್ತು. ಜಿ. ಜನಾರ್ದನರೆಡ್ಡಿ ಸೇರಿ ರೆಡ್ಡಿ ಸಹೋದರರು ರಾಜ್ಯ ರಾಜಕೀಯದ ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು.
2008ರ ನಂತರದ ಚುನಾವಣೆಗಳಲ್ಲಿ ಕೂಡ, ಏಳು ಶಾಸಕರನ್ನು ಆಯ್ಕೆ ಮಾಡಿಕೊಂಡ ರೆಡ್ಡಿ ಸಹೋದರರು ನಂತರ ನಡೆದ ಚುನಾವಣೆಗಳಲ್ಲಿ ಜನಬೆಂಬಲ ಕಳೆದುಕೊಳ್ಳುತ್ತಿರುವುದು ಸಾಬೀತಾಗುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಸಂಸದೆ ಜೆ. ಶಾಂತ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಅವರಿಂದ ಕೇವಲ 2000 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ವಾಸ್ತವವಾಗಿ ತಾವೇ ಗೆಲುವು ಸಾಧಿಸಿರುವುದಾಗಿ ಎನ್.ವೈ. ಹನುಮಂತಪ್ಪ ಅವರು ಬಹಿರಂಗವಾಗಿ ಹೇಳುತ್ತಾ 'ಅಧಿಕಾರಿಗಳು ವಂಚಿಸಿದ್ದಾರೆ" ಎನ್ನುತ್ತಿದ್ದಾರೆ. (ಈ ಕುರಿತು ವಿವಾದ ನ್ಯಾಯಾಲಯದಲ್ಲಿದೆ)
ಈ ಸಂದರ್ಭದಲ್ಲಿ ಸಂಸದೆ ಜೆ. ಶಾಂತಾ ಅವರ ಗೆಲುವು ಕೇವಲ 2000 ಆಗಿತ್ತು. ಸಂಸತ್ ಚುನಾವಣೆಯ ನಂತರ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಮೃತ್ಯುಂಜಯ ಜಿನಗಾ ಅವರು ಸ್ಥಳೀಯ ಸಂಸ್ಥೆಗಳ ಅಭ್ಯರ್ಥಿಳ ಮತಗಳಿಂದ ಗೆಲುವು ಸಾಧಿಸಿದ್ದು ಕೂಡ ಸಾಹಸ.
ಪ್ರಸ್ತುತ ಜಿಲ್ಲಾ - ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿಯ 18 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೂ ಕೂಡ ಈ ಗೆಲುವು ರೆಡ್ಡಿ ಸಹೋದರರ ವರ್ಚಸ್ಸು, ಪ್ರಭಾವವನ್ನು ಅವಲಂಭಿಸಿಲ್ಲ. ಬದಲಾಗಿ ಅಭ್ಯರ್ಥಿಗಳ ವರ್ಚಸ್ಸು, ಹಣದ ಪ್ರಭಾವ, ಜಾತಿಯ ಲೆಕ್ಕಾಚಾರಗಳೇ ಕೆಲಸ ಮಾಡಿವೆ.
ಈ ಹಿನ್ನಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಗಣಿ ರೆಡ್ಡಿಗಳ ರಾಜಕೀಯ ವರ್ಚಸ್ಸಿನ ಹಿಡಿತ ದಿನೇ ದಿನೇ ಕ್ರಮೇಣ ಕುಗ್ಗುತ್ತಿದೆ ಎಂದೇ ವಿಶ್ಲೇಷಿಸಲಾಗಿದೆ.
ಪ್ರಸ್ತುತ ಆರು ಶಾಸಕರು, ಮೂವರು ಸಚಿವರು, ಮತ್ತೋರ್ವ ಎಂಎಲ್ಸಿ, ಸಂಸದೆ, ಆಡಳಿತ ಸರ್ಕಾರದ ಯೋಜನೆಗಳ ಬೆಂಬಲ, ಅಪಾರವಾದ ಹಣ, ಜಿಲ್ಲೆಯ ಮೇಲೆ ಬಿಗಿ ಹಿಡಿತ ಇವೆಲ್ಲವೂ ಇದ್ದೂ ಕೂಡ 18 ಅಭ್ಯರ್ಥಿಗಳು ಮಾತ್ರ ಬಿಜೆಪಿಯಿಂದ ಗೆಲುವು ಸಾಧಿಸಿರುವುದು ಗಮನಾರ್ಹ.
ಗಣಿ - ಗಡಿ ವಿವಾದ, ನಾಯಕತ್ವದ ವಿರುದ್ಧ ಹೋರಾಟ, ಪಕ್ಷದಲ್ಲೇ ಸೃಷ್ಟಿಸಿಕೊಂಡ ಸಮಸ್ಯೆಗಳು ಇವರ ವರ್ಚಸ್ಸನ್ನು ಕುಗ್ಗಿಸಿವೆ. ಮಾಧ್ಯಮಗಳಲ್ಲಿಯ ಸುಳ್ಳು ಪೊಳ್ಳು ಪ್ರಚಾರ, ಜನರಿಂದ ಸದಾ ದೂರ ಇದ್ದುದ್ದುಕೂಡ ಕಾರಣ. [ಜಿಲ್ಲಾ ಪಂಚಾಯತಿ ಚುನಾವಣೆ]