ಬಳ್ಳಾರಿ : ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಸದಸ್ಯೆ ಬಲಿ
ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಧ್ಯಾಹ್ನ ಮಾತನಾಡಿ, 18 ತಮಗೆ ಅದೃಷ್ಟದ ಸಂಖ್ಯೆ. ಕಳೆದ ಜಿಲ್ಲಾ ಪಂಚಾಯಿತಿಯಲ್ಲಿ ಕೂಡ ಬಿಜೆಪಿಯಲ್ಲಿ 18 ಸದಸ್ಯರಿದ್ದರು. ಬಳ್ಳಾರಿ ನಗರಸಭೆಯಲ್ಲಿ ಬಿಜೆಪಿ ಮೊದಲು ಅಧಿಕಾರ ಸ್ಥಾಪಿಸಿದಾಗ ಕೂಡ 18 ಸದಸ್ಯರಿದ್ದರು. ಈ ಬಾರಿ ಜಿಲ್ಲಾ ಪಂಚಾಯಿತಿಗೆ 18 ಸದಸ್ಯರು ಆಯ್ಕೆ ಆಗಿರುವುದು ಹಿನ್ನಡೆ ಅಲ್ಲ. ಮತದಾರರು ಅಭಿವೃದ್ಧಿ ಯೋಜನೆಗಳಿಗಾಗಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಕಳೆದ 10 ವರ್ಷಗಳಿಂದ ನಾವು ಯಾವು ಚುನಾವಣೆಗಳಲ್ಲಿ ಸೋಲು ಕಂಡಿಲ್ಲ ಎಂದರು.
ಪಕ್ಷದ ತತ್ವ, ಸಿದ್ಧಾಂತ, ಅಭಿವೃದ್ಧಿಯನ್ನು ಒಪ್ಪಿಕೊಂಡು ಸಿರುಗುಪ್ಪ ತಾಲೂಕಿನ ಹಳೆಕೋಟೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಗರತ್ನಮ್ಮ ಅವರು ಬಿಜೆಪಿಗೆ ಸೇರ್ಪಡೆ ಅಗಿದ್ದಾರೆ. ನಾಗರತ್ನಮ್ಮ ಅವರ ಪತಿ ಬಿಜೆಪಿ ಸದಸ್ಯರು. ಈ ಹಿನ್ನೆಲೆಯಲ್ಲಿ ಅವರು ಮಾತೃಪಕ್ಷಕ್ಕೇ ಮರಳಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ನಾಗರತ್ನಮ್ಮ ಮತ್ತು ದೊಡ್ಡಹನುಮಂತಪ್ಪ ಮಾತನಾಡಿ, ನಾವು ಮೂಲತಃ ಬಿಜೆಪಿಯವರು. ಪಕ್ಷ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಕಾರಣ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿದ್ದೇವೆ. ಸಚಿವರಾದ ಬಿ. ಶ್ರೀರಾಮುಲು, ಜಿ. ಜನಾರ್ದನರೆಡ್ಡಿ ಅವರ ಅಭಿವೃದ್ಧಿ ಯೋಜನೆಗಳನ್ನು ಒಪ್ಪಿ ಪಕ್ಷಕ್ಕೆ ಮತ್ತೆ ಸೇರುತ್ತಿದ್ದೇವೆ ಎಂದರು.
ಸಚಿವ ಬಿ. ಶ್ರೀರಾಮುಲು, ಸಂಸದೆ ಜೆ. ಶಾಂತ, ಶಾಸಕ ಟಿ.ಎಚ್. ಸುರೇಶ್ಬಾಬು, ಎಂಎಲ್ಸಿ ಮೃತ್ಯುಂಜಯ ಜಿನಗಾ, ಬುಡಾ ಅಧ್ಯಕ್ಷ ಗುರುಲಿಂಗನಗೌಡ, ಕೆಎಂಎಫ್ ಅಧ್ಯಕ್ಷ ತಿಮ್ಮಾರೆಡ್ಡಿ, ಮುಖಂಡರಾದ ಕೆ.ಎ. ರಾಮಲಿಂಗಪ್ಪ, ಕೋಳೂರು ಬಸವನಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ ಹಾಗೂ ಜಿಲ್ಲಾ ಪಂಚಾಯಿತಿಯ ನೂತನ 18 ಸದಸ್ಯರು ಉಪಸ್ಥಿತರಿದ್ದರು. [ಜಿಲ್ಲಾ ಪಂಚಾಯಿತಿ]