ಸಂಡೂರಿನಲ್ಲಿ ಬಿಜೆಪಿಗೆ ಮಣ್ಣು ತಿನ್ನಿಸಿದ ಮತದಾರ
ಜಿಲ್ಲಾ - ತಾಲೂಕು ಪಂಚಾಯಿತಿ ಚುನಾವಣೆ ಪ್ರಕ್ರಿಯೆ ಪ್ರಾರಂಭ ಆದಾಗಿನಿಂದಲೂ ಜಿ. ಸೋಮಶೇಖರರೆಡ್ಡಿ ಅವರು ಸಂಡೂರು ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸುವ, ಪ್ರಚಾರ ನಿರ್ವಹಿಸುವ ಎಲ್ಲಾ ಜವಾಬ್ದಾರಿವಹಿಸಿದ್ದರು.
ಬಳ್ಳಾರಿಯಿಂದ ಪಡ್ಡೆ ಹುಡುಗರ ಗುಂಪುಗಳನ್ನು ಕಟ್ಟಿಕೊಂಡು 5 - 6 ಸ್ಕ್ರಾಪಿಯೋಗಳಲ್ಲಿ ನಿತ್ಯ ನಸುಕಿನ 7 ಗಂಟೆಗೆಲ್ಲಾ ಸಂಡೂರು ತಾಲೂಕಿನ ಹಳ್ಳಿಗಳಲ್ಲಿ ಮುಖಂಡರು, ಮತದಾರರ ಮನೆಯಂಗಳಗಳಲ್ಲಿ ಪ್ರತ್ಯಕ್ಷ ಆಗಿ ಮತ ಕೇಳಿದರೂ ಮತದಾರರು ಅವರ ಲೆಕ್ಕಾಚಾರವನ್ನೆಲ್ಲ ತಲೆಕೆಳಗು ಮಾಡಿದ್ದಾರೆ.
ಸಂಡೂರು ಶಾಸಕ ಇ. ತುಕಾರಾಂ, ಸಂತೋಷ್ ಲಾಡ್ - ಅನಿಲ್ ಲಾಡ್ : ಕಾರ್ತಿಕ್ ಘೋರ್ಪಡೆ - ವೆಂಕಟರಾವ್ ಘೋರ್ಪಡೆ ಅವರ ಬಿಗಿ ಹಿಡಿತದಲ್ಲಿ ಇರುವ ಮತದಾರರು ಬಿಜೆಪಿಗೆ ನಿರೀಕ್ಷಿತ ಗೆಲುವು ನೀಡದೇ ಬೊಮ್ಮಘಟ್ಟ ಮತ್ತು ಕಾಳಿಂಗೇರಿ ಕ್ಷೇತ್ರಗಳಲ್ಲಿ ಮಾತ್ರ ಆಶೀರ್ವಾದ ಮಾಡಿದ್ದಾರೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ಇದೇ ಮೊದಲಬಾರಿಗೆ ಖಾತೆಯನ್ನು ತೆರೆದಿದೆ.
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಭುತ್ವ ಸಾಧಿಸಿ, ಭವಿಷ್ಯದ ಚುನಾವಣೆಯಲ್ಲಿ ಶಾಸಕರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ದೂರಾಲೋಚನೆ ಹೊಂದಿದ್ದ ಬಿಜೆಪಿ ಮತ್ತು ರೆಡ್ಡಿ ಬ್ರದರ್ಸ್ಗೆ ಈ ಫಲಿತಾಂಶ ಭಾರೀ ಮುಖಭಂಗ ಮಾಡಿದಂತಾಗಿದೆ. ಯಥಾಪ್ರಕಾರ ಈ ತಾಲೂಕಿನಲ್ಲಿ ಕಾಂಗ್ರೆಸ್ನ 15 ಸದಸ್ಯರು ಗೆಲುವು ಸಾಧಿಸಿದ್ದಾರೆ. [ಪಂಚಾಯಿತಿ ಚುನಾವಣೆ]