ಜಿಪಂ ಫಲಿತಾಂಶ : ಗೆದ್ದರೆ ಗದ್ದುಗೆ, ಸೋತರೆ...
ಕಳೆದ ಎರಡೂವರೆ ವರ್ಷ ರಾಜ್ಯದಲ್ಲಿ ನಡೆದ ಬಿಬಿಎಂಪಿ ಚುನಾವಣೆ ಸೇರಿದಂತೆ ಎಲ್ಲ ಉಪಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಗಳಿಸಿದೆ. ಹೀಗಾಗಿ ಬಿಜೆಪಿ ಗೆದ್ದೇಗೆಲ್ಲುತ್ತೇವೆ ಎಂದು ಬೀಗುತ್ತಿದೆ. ಇನ್ನೊಂದಡೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒಳಗೊಳಗೆ ನಡುಕ ಶುರವಾಗಿದೆ. ಆಕಸ್ಮಾತ್ ಜಿಪಂ ಚುನಾವಣೆಯಲ್ಲಿ ಪಕ್ಷ ಸೋತರೆ ಪಕ್ಷಕ್ಕೆ ಮುಖಭಂಗವಾಗುವುದಂತೂ ಖಂಡಿತ. ಅದರ ಜೊತೆಗೆ ಮುಖ್ಯಮಂತ್ರಿ ಪದವಿಯನ್ನು ಉಳಿಸಿಕೊಳ್ಳಲು ಮತ್ತೊಂದು ಸುತ್ತಿನ ದೊಂಬರಾಟ ನಡೆಸಬೇಕಾದ ಪ್ರಸಂಗ ಎದುರಾಗಬಹುದು.
ಭೂಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಜಿಪಂ ಚುನಾವಣೆವರೆಗೆ ಜೀವದಾನ ನೀಡಿದೆ. ಮುಖ್ಯಮಂತ್ರಿ ಪದವಿಯಲ್ಲಿ ಮುಂದುವರೆಯಬೇಕಾದರೆ ಈ ಚುನಾವಣೆಯಲ್ಲಿ ಗೆಲ್ಲಲೇಬೇಕು. ಒಂದು ವೇಳೆ ಬಿಜೆಪಿ ಸೋತರೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಮುಖ್ಯಮಂತ್ರಿ ರಾಜೀನಾಮೆಗೆ ಭಾರಿ ಒತ್ತಡ ತರುವುದನ್ನು ಅಲ್ಲಗಳೆಯಲಾಗದು. ಅಲ್ಲದೇ ಬಿಜೆಪಿಯೊಳಗೆ ಬಳ್ಳಾರಿ ಸಚಿವತ್ರಯರು ಯಡಿಯೂರಪ್ಪ ಅವರನ್ನು ಹೇಗಾದರೂ ಮಾಡಿ ಪದವಿಯಿಂದ ಕೆಳಗಿಳಿಸಲು ಹೈಕಮಾಂಡ್ ಮೇಲೆ ಒತ್ತಡ ಹಾಕುವ ಸಾಧ್ಯತೆ ಇದೆ.
ಸರಕಾರದ ವಿರುದ್ಧ ಮುಖ್ಯವಾಗಿ ಯಡಿಯೂರಪ್ಪ ಅವರನ್ನು ಕೆಳಗಿಳಸಬೇಕು ಎಂದು ಪಣತೊಟ್ಟಿರುವ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರ ದೊಡ್ಡ ದೊಡ್ಡ ಹಗರಣಗಳ ಜೊತೆಗೆ ಸಣ್ಣ ಪುಟ್ಟ ಹಕ್ಯಾಟ-ಜಗ್ಗಾಟಗಳನ್ನು ದೊಡ್ಡದು ಮಾಡಿ ಬಿಜೆಪಿ ಹೈಕಮಾಂಡ್ ಕಣ್ಣು ತೆರೆಸುವ ಕೆಲಸಕ್ಕೆ ಇಳಿಯಬಹುದು. ಜಿಪಂ ಚುನಾವಣೆಗೆ ಯಡಿಯೂರಪ್ಪ ಭ್ರಷ್ಟ ಮತ್ತು ಸ್ವಜನಪಕ್ಷಪಾತಿ ಎಂಬ ಹೆಸರುಳ್ಳ ಸಾರ್ವಜನಿಕ ಚಾರ್ಜ್ ಶೀಟ್ ನ್ನು ದೇವೇಗೌಡರು ಈಗಾಗಲೇ ಬಿಡುಗಡೆ ಮಾಡಿದ್ದಾರೆ.
ಈ ಚಾರ್ಜ್ ಶೀಟ್ ನ್ನು ರಾಜ್ಯಪಾಲ ಎಚ್ ಆರ್ ಭಾರದ್ವಾಜ್, ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಯುಪಿಎ ಚೇರಮನ್ ಸೋನಿಯಾ ಗಾಂಧಿ, ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ಯಡಿಯೂರಪ್ಪ ಅವರ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಪ್ರತಿಯನ್ನು ಕಳುಹಿಸಿದ್ದಾರೆ. ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಮುಗ್ಗರಿಸಿದರಂತೂ ಅವರ ಸ್ಥಿತಿ ಚಿಂತಾಜನಕವಾಗಬಹುದು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಮೇಲಿಂದ ಮೇಲೆ ಯಡಿಯೂರಪ್ಪ ಅವರ ಮೇಲಿರುವ ಆರೋಪಗಳು ನಿರಾಧಾರ. ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಹಿಂದಿನ ಮರ್ಮವೇನು? ಮೂಲಗಳ ಪ್ರಕಾರ ಚುನಾವಣೆಯಲ್ಲಿ ಸೋತರೂ, ಗೆದ್ದರೂ ನಾನೇ ಮುಂದಿನ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ರಾಜ್ಯಭಾರ ಮಾಡುವೆ ಎಂಬ ಸ್ಪಷ್ಟ ಸಂದೇಶವನ್ನು ಯಡಿಯೂರಪ್ಪ ರವಾನಿಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಪೀಠಕ್ಕೆ ಅಂಟಿಕೊಂಡಿರುವ ಯಡಿಯೂರಪ್ಪ ಅವರನ್ನು ಕೆಳಗಿಳಿಸುವುದು ಅಷ್ಟೂ ಸುಲಭದ ಮಾತಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ನಾಳೆವರೆಗೂ ಎಲ್ಲರೂ ಕಾಯಲೇಬೇಕಾಗಿದೆ.(ಯಡಿಯೂರಪ್ಪ)