ಸವಣೂರ : ಅಪಘಾತದಲ್ಲಿ ವ್ಯಕ್ತಿಯ ಸಜೀವ ದಹನ
ಸವಣೂರ ಹೊರವಲಯದಲ್ಲಿರುವ ಮೊರಾರ್ಜಿ ವಸತಿ ಶಾಲೆಯ ಬಳಿ ಶಿರಬಡಗಿ ಗ್ರಾಮಕ್ಕೆ ತೆರಳುತ್ತಿದ್ದ ಮಾರುತಿ ಓಮ್ನಿ ವಾಹನ (ಕೆ.ಎ 25- ಎನ್ 9860) ರವಿವಾರ ನಸುಕಿನ ಜಾವ 3 ಗಂಟೆಗೆ ಅಪಘಾತಕ್ಕೆ ಒಳಗಾಗಿದೆ. ರಸ್ತೆ ಪಕ್ಕದ ಚಿಕ್ಕ ಸೇತುವೆಯ ಕಟ್ಟೆಗೆ ರಭಸದಿಂದ ಬಂದ ಮಾರುತಿ ಓಮ್ನಿ ಡಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ವಾಹನಕ್ಕೆ ಇಂಧನ ಪೂರೈಸುವ ಗ್ಯಾಸ್ ಸಿಲೆಂಡರ್ನ ಸೋರಿಕೆಯಿಂದ ವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ ತೀವ್ರತೆಗೆ ಓರ್ವ ವ್ಯಕ್ತಿ ಸೇರಿದಂತೆ ಸಂಪೂರ್ಣ ವಾಹನ ಭಸ್ಮವಾಗಿದೆ.
ಈ ಅಪಘಾತದಲ್ಲಿ ತಾಲೂಕಿನ ಶಿರಬಡಗಿ ಗ್ರಾಮದಿಂದ ಶಿಗ್ಗಾಂವಿಗೆ ಮಲ್ಲಿಗೆ ಹೂವನ್ನು ಮಾರಲು ಹೋಗಿದ್ದ ಚನ್ನಬಸಪ್ಪ ಶಂಕರಪ್ಪ ಹುಣಸಿಕಟ್ಟಿ (45) ಎಂಬುವರು ವಾಹನದಲ್ಲಿಯೇ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಶಿರಬಡಗಿ ಗ್ರಾಮದ ವಾಹನ ಚಾಲಕ ಹುಸೇನಸಾಬ ಅಬ್ದುಲಸಾಬ ನದಾಫ ಹಾಗೂ ಇನ್ನೋರ್ವ ಪ್ರಯಾಣಿಕ ಚನ್ನಪ್ಪ ಬಡ್ನಿ ಅವರು ಅಪಘಾತದ ರಭಸಕ್ಕೆ ವಾಹನದಿಂದ ಹೊರಬಿದ್ದಿದ್ದರೂ ಅವರಿಗೆ ತೀವ್ರ ಸ್ವರೂಪದಲ್ಲಿ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕೆ.ಎಮ್.ಸಿಗೆ ದಾಖಲಿಸಲಾಗಿದೆ. ಅಪಘಾತದ ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಹೊತ್ತಿ ಉರಿಯುತ್ತಿದ್ದ ವಾಹನದ ಬೆಂಕಿಯನ್ನು ನಂದಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಮಾರುತಿ ಓಮ್ನಿ ವಾಹನ ಚಾಲಕನ ನಿರ್ಲಕ್ಷತನದ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಮೃತ ಪಟ್ಟ ವ್ಯಕ್ತಿಯ ಸಹೋದರ ರವಿ ಶಂಕ್ರಪ್ಪ ಹುಣಸಿಕಟ್ಟಿ ಅವರು ನೀಡಿರುವ ದೂರಿನ ಅನ್ವಯ, ಸವಣೂರ ಠಾಣೆಯ ಪಿ.ಎಸ್.ಐ ಕೆ. ಜಗನ್ನಾಥರೆಡ್ಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೀರಿಗೆ ಬಿದ್ದು ಸಾವು : ತಾಲೂಕಿನ ಯಲವಿಗಿ ಗ್ರಾಮದ ಅಗಸರಗುಂಡಿಯ ಚೆಕ್ ಡ್ಯಾಂಮಿನ ನೀರಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತ ಪಟ್ಟಿರುವ ವ್ಯಕ್ತಿಯನ್ನು ಬೆಂಗಳೂರಿನ ಜೆ.ಎಸ್ ವಿಶ್ವನಾಥ ಶಂಕರಪ್ಪ (55) ಎಂದು ಗುರ್ತಿಸಲಾಗಿದ್ದು, ಮೃತರ ಪತ್ನಿ ಎಸ್.ಪಿ ಪ್ರೇಮಾ ನೀಡಿರುವ ದೂರಿನನ್ವಯ ಸವಣೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. [ಸವಣೂರ]