ಕಾರ್ಕಳ ಮತದಾರನ ಕಕ್ಕಾಬಿಕ್ಕಿ ಮಾಡಿದ ಆಯೋಗ
ಮತಗಟ್ಟೆಗಳ ಹೊರಾಂಗಣ ದ್ವಾರದಲ್ಲಿ ಚುನಾವಣಾ ಆಯೋಗದ ಎಚ್ಚರಿಕೆಯ ಕರಪತ್ರವನ್ನು ವೀಕ್ಷಿಸಿದ ಮತದಾರರು ಬೆಚ್ಚಿ ಬೀಳುವಂತಾಗಿತ್ತು. ಕಾರಣ "ವೋಟಿನ ಕಾಗದವನ್ನು ಮತಪೆಟ್ಟಿಗೆಯಲ್ಲಿ ಹಾಕಬೇಕು. ಅದನ್ನು ಹೊರಗೆ ತೆಗೆದುಕೊಂಡು ಹೋಗಕೂಡದು" ಎಂದು ಉಲ್ಲೇಖಿಸಲಾಗಿದೆ. ಉಲ್ಲಂಘಿಸಿದ್ದಲ್ಲಿ ಕಾನೂನು ಮೇರೆಗೆ ಶಿಕ್ಷಿಸಲ್ಪಡುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ. ಆದರೆ ಈ ಬಾರಿ ಮತದಾನ ಮತಯಂತ್ರಗಳ ಮೂಲಕ ನಡೆಯುತ್ತಿರುವುದು ಆಯೋಗಕ್ಕೇ ಗೊತ್ತಿಲ್ಲವೆ?
ಎಲ್ಲಾ ವ್ಯವಸ್ಥೆಯ ಮೇಲೆ ನಿಗಾ ವಹಿಸುವ ಚುನಾವಣಾ ಆಯೋಗ, ಈ ಕರಪತ್ರದ ಮೇಲೆ ಎಳ್ಳಷ್ಟೂ ಕಾಳಜಿ ವಹಿಸಿಲ್ಲ. ಮತಯಂತ್ರಗಳ ಮೂಲಕ ಮತದಾನ ಮಾಡಿದ ಮತದಾರರು, ಈ ಎಚ್ಚರಿಕೆಯ ಕರೆಗಂಟೆಯನ್ನು ಪಾಲಿಸುವುದಾದರೂ ಹೇಗೆ? ಹಾಗದರೆ ಚುನಾವಣಾ ಆಯೋಗದಂತೆ ಕಾಗದವನ್ನು ಮತಪೆಟ್ಟಿಗೆಗೆ ಹಾಕುವ ಅವಕಾಶ ದೊರೆಯದ ಮತದಾರರಿಗೆ ಯಾರು ಶಿಕ್ಷೆ ವಿಧಿಸುತ್ತಾರೆ? ಇದೊಂದು ಬೇಜಾವಬ್ದಾರಿಯ ಪರಮಾವಧಿ ಎಂದು ಮತದಾರರು ಶಪಿಸುತ್ತಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶದಲ್ಲಿ ಮತದಾನ : ಕಾರ್ಕಳ ತಾಲೂಕಿನ ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಬಿರುಸಿನ ಮತದಾನ ನಡೆದಿದೆ. ಅತೀ ಸೂಕ್ಷ್ಮ ಬೂತ್ಗಳಲ್ಲಿ ಎಎನ್ಎಫ್ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು. ಜನತೆ ಕೂಡ ನಿಶ್ಚಿಂತೆಯಿಂದ ಬಂದು ಮತದಾನದಲ್ಲಿ ಪಾಲ್ಗೊಂಡರು.