ವಿದ್ಯಾರ್ಥಿಗಳಿಗೆ ಕಬಡ್ಡಿ ಆಟಗಾರ್ತಿ ಮಮತಾ ಕಿವಿಮಾತು
ಚನ್ನಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ನ ಕ್ರೀಡಾ ಮತ್ತು ಪ್ರತಿಭಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಮತಾ, ಕ್ರೀಡೆಗಳ ಬಗ್ಗೆ ತಾತ್ಸಾರ ಮನೋಭಾವ ತಾಳದೆ ಇಂದಿನಿಂದಲೇ ಕ್ರೀಡೆಯಲ್ಲಿ ಪಾಲ್ಗೊಳ್ಳಿ, ಇದಕ್ಕೆ ಪೋಷಕರ ಹಾಗೂ ಶಿಕ್ಷಕರ ಸಲಹೆಗಳನ್ನು ಪಡೆದು ಉತ್ತಮ ಕ್ರೀಡಾಪಟುವಾಗಿ, ನಮ್ಮ ದೇಶದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿ ಎಂದು ಅವರು ಕರೆ ನೀಡಿದರು.
ಕಬಡ್ಡಿ ಆಟ ಆಯ್ಕೆ ಮಾಡಿಕೊಂಡಿದ್ದು ಅನಿರೀಕ್ಷಿತ ಎಂದ ಮಮತಾ, ಯಾವುದೇ ಕ್ರೀಡೆಯಾಗಲೀ ಅದರಲ್ಲಿ ಉತ್ತಮವಾಗಿ ಪಾಲ್ಗೊಂಡು, ಗುರಿ ಸಾಧಿಸಬೇಕು ಎಂದರು. ಹಾಗೆಯೇ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅವರು, ನಾನು ಈ ಮಟ್ಟಕ್ಕೆ ಬೆಳೆಯುತ್ತೇನೆಂದು ನನಗೇ ನಂಬಿಕೆಯಿರಲಿಲ್ಲ, ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈಗಾಗಲೇ ನಾಲ್ಕು ಬಾರಿ ದೇಶವನ್ನು ಪ್ರತಿನಿಧಿಸಿ ನಾಲ್ಕು ಚಿನ್ನದ ಪದಕ ಪಡೆದಿದ್ದೇನೆ. ಆಗ ಯಾರೂ ಈ ಮಟ್ಟದಲ್ಲಿ ಗುರ್ತಿಸಿರಲಿಲ್ಲ. ಏಷ್ಯನ್ ಕ್ರೀಡಾಕೂಟದಲ್ಲಿ ಈಗ ಚಿನ್ನದ ಪದಕ ಗಳಿಸಿದ್ದರಿಂದ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ ಎಂದರು.
ಕೇಂಬ್ರಿಡ್ಜ್ ವಿದ್ಯಾಸಂಸ್ಥೆ ವತಿಯಿಂದ ಚಿನ್ನದ ಪದಕ ವಿಜೇತೆ ಮಮತಾ ಪೂಜಾರಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಎಸ್.ಲಿಂಗೇಶ್ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ಪ್ರಾಂಶುಪಾಲರಾದ ನಿಂಗೇಗೌಡ, ರೇಣುಕಾದೇವಿ ಸಂದರ್ಭದಲ್ಲಿ ಹಾಜರಿದ್ದರು.