ನಿತ್ಯಾನಂದ ಸ್ವಾಮಿ 34ನೇ ಹುಟ್ಟುಹಬ್ಬ ಆಚರಣೆ
ಬೆಳ್ಳಂಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನಾದಿಗಳನ್ನು ಪೂರೈಸಿದ ನಂತರ ಐದು ಗಂಟೆಯ ಚುಮುಚುಮು ಚಳಿಯಲ್ಲಿ ಶಿವನ ಸನ್ನಿಧಾನಕ್ಕೆ ತೆರಳಿದ ನಿತ್ಯಾನಂದ ಮೂರು ಗಂಟೆಗಳ ಕಾಲ ಭೋಲೇನಾಥನ ಪೂಜೆ, ಸ್ಮರಣೆಯಲ್ಲಿ ಕಾಲ ಕಳೆದರು. ಅಲ್ಲಿ ನೆರೆದಿದ್ದ ಸಾವಿರಾರು ಭಕ್ತರ ಉಪಸ್ಥಿತಿಯಿಂದ ಆನಂದತುಂದಿಲರಾದ ನಿತ್ಯಾನಂದರು ಭಕ್ತಿಪರವಶತೆಯಲ್ಲಿ ಆನಂದಭಾಷ್ಪ ಮಿಡಿದರು.
ಭಕ್ತರ ಉನ್ಮಾದದ ನಡುವೆ ಸಂತಸದಿಂದ ಜನ್ಮದಿನಾಚರಣೆಯನ್ನು ಆಚರಿಸಿಕೊಂಡ ನಿತ್ಯಾನಂದ ನಂತರ ಭಕ್ತಾದಿಗಳು ಪ್ರಸಾದಾದಿ ವಿತರಿಸಿದರು. ಆದರೆ, ದೇವಸ್ಥಾನದೊಳಗಡೆ ಒಂದೆಡೆ ಭಕ್ತರಿಂದ ಜಯಘೋಷ ಮೊಳಗುತ್ತಿದ್ದರೆ, ಅದೇ ದೇವಸ್ಥಾನದ ಹೊರಭಾಗದಲ್ಲಿ ಸಿಪಿಎಂ ಕಾರ್ಯಕರ್ತರು ಆಧ್ಯಾತ್ಮ ಗುರುವಾಗಿದ್ದೂ ಲೈಂಗಿಕ ಚಟುವಟಿಕೆಗಳಲ್ಲಿ ತಲ್ಲೀನರಾಗಿ, ಸಿಕ್ಕಿಬಿದ್ದು, ಜೈಲುವಾಸ ಕಂಡು ಬೇಲ್ ಮೇಲೆ ಹೊರಬಿದ್ದಿರುವ ನಿತ್ಯಾನಂದರ ವಿರುದ್ಧ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಿಂದ ಹಸನ್ಮುಖಿಯಾಗಿದ್ದರೂ ವಿಚಲಿತರಾದಂತೆ ಕಂಡ ನಿತ್ಯಾನಂದರು ದೇವಸ್ಥಾನ ಹಿಂಬಾಗಿಲಿಂದ ಪರಾರಿಯಾಗಿದ್ದಾರೆ. ಆದರೂ ಬೆಂಬಿಡದ ನಿತ್ಯಾನಂದದ ವಿರೋಧಿಗಳು ಹಾದಿಯುದ್ದಕ್ಕೂ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಕೊನೆಗೆ ಹಾಗೂಹೀಗೂ ಮಾಡಿ ತಮಿಳುನಾಡಿನಲ್ಲಿರುವ ಆಶ್ರಮವನ್ನು ನಿತ್ಯಾನಂದರು ಸೇರಿಕೊಂಡಿದ್ದಾರೆ. [ಸ್ವಾಮಿ ನಿತ್ಯಾನಂದ]