ಇಂದು ಸಂಜೆ 'ಕನ್ನಡವೇ ಸತ್ಯ - ಅಶ್ವತ್ಥ್ ನಿತ್ಯ'
ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಂಜೆ 5.30ಕ್ಕೆ ಈ ಕಾರ್ಯಕ್ರಮ 25 ಸಾವಿರ ಅಭಿಮಾನಿಗಳು ಸಮ್ಮುಖದಲ್ಲಿ, ಸಿ ಅಶ್ವತ್ಥ್ ಅವರ ಶಿಷ್ಯ ಕಿಕ್ಕೇರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಜರುಗಲಿದೆ. 3 ಸಾವಿರಕ್ಕೂ ಹೆಚ್ಚು ಹಾಡುಗಾರರು ಸಂಗೀತ ಸುಧೆ ಹರಿಸಲಿದ್ದಾರೆ. 40ಕ್ಕೂ ಹೆಚ್ಚು ವಾದ್ಯಗಾರರು ಸಂಗೀತಗಾರರಿಗೆ ಸಹಕರಿಸುತ್ತಿದ್ದಾರೆ.
ವಿಶ್ವೇಶತೀರ್ಥ ಶೀಪಾದಂಗಳರವರು, ಡಾ. ಶಾಂತವೀರ ಮಹಾಸ್ವಾಮೀಜಿಯವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸುತ್ತಿದ್ದಾರೆ. ಅಶ್ವತ್ಥ್ ಅವರ ಸಂಗೀತ ಸಾಮರ್ಥ್ಯವನ್ನು ಅಪಾರವಾಗಿ ಮೆಚ್ಚಿದ್ದ ಡಾ. ಎಸ್ ಪಿ ಬಾಲಸುಬ್ರಮಣ್ಯಂ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಕವಿ ಡಾ. ಎಚ್ಎಸ್ ವೆಂಕಟೇಶ ಮೂರ್ತಿಯವರು ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸವಿನೆನಪಿಗಾಗಿ ವಿಶೇಷ ಸ್ಮರಣ ಸಂಚಿಕೆ ಮತ್ತು 300 ಜನಪ್ರಿಯ ಭಾವಗೀತೆಗಳನ್ನೊಳಗೊಂಡ 'ಗೀತಾಂಜಲಿ' ಪುಸ್ತಕವನ್ನು ಹೊರತರಲಾಗುತ್ತಿದೆ. ಸ್ಮರಣ ಸಂಚಿಕೆಯನ್ನು ರಾಷ್ಟ್ರಕವಿ ಡಾ. ಜಿಎಸ್ ಶಿವರುದ್ರಪ್ಪ ಅವರು ಮತ್ತು ಗೀತಾಂಜಲಿ ಪುಸ್ತಕವನ್ನು ಗೃಹ ಸಚಿವ ಆರ್ ಅಶೋಕ್ ಅವರು ಬಿಡುಗಡೆ ಮಾಡಲಿದ್ದಾರೆ. ಸಿ ಅಶ್ವತ್ಥ್ ಅವರ ಇಡೀ ಕುಟುಂಬ ಭಾಗವಹಿಸುತ್ತಿರುವುದು ವಿಶೇಷ. ಕಾರ್ಯಕ್ರಮದ ಅಂಗವಾಗಿ ಸಿ ಅಶ್ವತ್ಥ್ ಅವರೇ ರಾಗ ಸಂಯೋಜಿಸಿದ್ದ ಕೆಲ ಗೀತೆಗಳಿಗೆ ನೃತ್ಯವನ್ನು ಸಂಯೋಜಿಸಿ ಪ್ರದರ್ಶಿಸಲಾಗುತ್ತಿದೆ.
ಅಮೆರಿಕಾದ ಅಕ್ಕ ಸಂಘಟನೆ, ನಾವಿಕ, ಆಸ್ಟ್ರೇಲಿಯಾದ ಕನ್ನಡ ಸಂಘ, ಐಫಾ ಸಂಸ್ಥೆ, ದುಬೈ ಕನ್ನಡ ಸಂಘ, ಕುವೈತ್ ಕನ್ನಡ ಸಂಘ, ಬಹ್ರೇನ್ ಕನ್ನಡ ಸಂಘ, ಅಬುಧಾಬಿ ಕನ್ನಡ ಸಂಘ, ಸಿಂಗಪುರ ಕನ್ನಡ ಸಂಘ, ಮಸ್ಕತ್ ಕನ್ನಡ ಸಂಘ, ಇಥಿಯೋಪಿಯಾದ ಕನ್ನಡ ಸಂಘದ ಕಲಾವಿದರು ಕೂಡ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಭಾಗವಹಿಸಲು ಇಚ್ಛಿಸುವ ಪ್ರೇಕ್ಷಕರಿಗೆ ಉಚಿತ ಪಾಸ್ ವ್ಯವಸ್ಥೆ ಮಾಡಲಾಗಿದೆ. [ಸಿ ಅಶ್ವತ್ಥ್]