ಭೀಕರ ಅಪಘಾತಕ್ಕೆ ಬೆಂಗಳೂರಿನ ಕುಟುಂಬ ಬಲಿ
ಗ್ರಾನೈಟ್ ಸಾಗಿಸುತ್ತಿದ್ದ ಲಾರಿಯೊಂದಕ್ಕೆ ಟೆಂಪೋಟ್ರಾವೆಲರ್(ಕಾಲ್ ಸೆಂಟರ್ ವಾಹನ) ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ 7 ಮಂದಿ ಸ್ಥಳದಲ್ಲೇ ಮೃತಪಟ್ಟು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ನಗರದ ಎಚ್ಎಎಲ್ ಸಮೀಪದ ಕೋಡಿಹಳ್ಳಿ ನಿವಾಸಿಗಳಾದ ಜಯರಾಮ ರೆಡ್ಡಿ(48), ಪೃಥ್ವಿ(18), ಸುಗುಣಾ(18), ಶ್ರುತಿ(19), ವಿಜಯ್ ಕುಮಾರ್, ಅರವಿಂದ್ ಮತ್ತು ವಾಹನ ಚಾಲಕ ಪ್ರಕಾಶ್(45) ಮೃತಪಟ್ಟಿರುವ ದುರ್ದೈವಿಗಳು.
ತೀವ್ರವಾಗಿ ಗಾಯಗೊಂಡಿರುವ ಭಾಗ್ಯಲಕ್ಷ್ಮೀ(48) ಅಶೋಕ್ ಹಾಗೂ ಉಳಿದವರನ್ನು ನಗರದ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದ ವೈದ್ಯರು ತಿಳಿಸಿದ್ದಾರೆ.
ದುರ್ದೈವಿಗಳು ತಮಿಳುನಾಡಿನ ವೇಲ್ಮವತ್ತೂರು, ವೆಳಾಂಕಣ್ಣಿ, ಪುದುಚೇರಿ ಸೇರಿದಂತೆ ವಿವಿಧ ದೇವಸ್ಥಾನಗಳ ದರ್ಶನಕ್ಕೆ ತೆರಳಿದ್ದರು, ಪ್ರವಾಸ ಮುಗಿಸಿಕೊಂಡು ನಗರಕ್ಕೆ ಹಿಂದಿರುಗುತ್ತಿದ್ದ ವೇಳೆ ಅವರಿದ್ದ ವಾಹನ ತಮಿಳುನಾಡಿನ ಕಾವೇರಿಪಟ್ಟಂ ಸೇತುವೆಯ ಬಳಿ ಗ್ರಾನೈಟ್ ಸಾಗಿಸುತ್ತಿದ್ದ ಲಾರಿಯೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಈ ಭೀಕರ ದುರಂತ ಸಂಭವಿಸಿದೆ.
ಕಾಲ್ ಸೆಂಟರ್ ಕಾಲಿಂಗ್ : ಟಿಟಿ ವಾಹನ ಚಾಲಕ ಯಶವಂತಪುರ ನಿವಾಸಿ ಪ್ರಕಾಶ್ ಸೋಮವಾರ ಪೂರ್ತಿ ಬಿಡುವಿಲ್ಲದೆ ವಾಹನ ಓಡಿಸಿ, ನಿದ್ದೆಗೆಟ್ಟಿದ್ದನು. ಸೋಮವಾರ ಬೆಳಗ್ಗೆ 8:30ಕ್ಕೆ ಮತ್ತೊಂದು ಟ್ರಿಪ್ ಇರುವ ಹಿನ್ನೆಲೆಯಲ್ಲಿ ಅತಿವೇಗವಾಗಿ ಬೆಂಗಳೂರಿನ ಕಡೆಗೆ ಹೊರಟಿದ್ದನು. ಅಪಘಾತಕ್ಕೀಡಾಗಿದವರು ಎಷ್ಟು ಹೇಳಿದರೂ ಕೇಳದೆ ರಾತ್ರಿಯೇ ವಾಹನ ಚಾಲನೆ ಮಾಡಿದ್ದಾನೆ. ಮೊದಲೇ ನಿದ್ದೆ ಕೆಟ್ಟಿದ್ದ ಹಾಗೂ ಮತ್ತೊಂದು ಟ್ರಿಪ್ ಹೋಗಬೇಕೆಂಬ ಒತ್ತಡದಲ್ಲಿದ್ದ ಚಾಲಕ, ಎದುರಿನಿಂದ ಬರುತ್ತಿದ್ದ ಲಾರಿ ಢಿಕ್ಕಿ ಈ ವೇಳೆ ನಿಯಂತ್ರಣ ತಪ್ಪಿ ಲಾರಿಗೆ ಢಿಕ್ಕಿ ಹೊಡೆದಿದ್ದಾನೆ ಎಂದು ಕೃಷ್ಣಗಿರಿ ಪೊಲೀಸರು ತಿಳಿಸಿದರು. [ಅಪಘಾತ]