ಬೇಲೇಕೇರಿ ಅದಿರು ನಾಪತ್ತೆ, ಸಿಐಡಿ ಚಾರ್ಜ್ ಶೀಟ್
ಬೇಲೇಕೇರಿ ಬಂದರು ಸಂರಕ್ಷಣಾಧಿಕಾರಿಯಾಗಿದ್ದ ಮಹೇಶ್ ಬಿಲಿಯೆ, ಸಲಗಾಂವಕರ್ ಮೈನಿಂಗ್ ಇಂಡಸ್ಟ್ರೀಸ್, ತುಂಗಭದ್ರ ಮಿನರಲ್ಸ್, ಜಿಂಪೆಕ್ಸ್ ಲಿಮಿಟೆಡ್ ಮತ್ತು ಆಯಾ ಕಂಪನಿಗಳ ಪ್ರತಿನಿಧಿಗಳ ವಿರುದ್ಧ ಕಲಂ 379, 411, 109, 120(ಬಿ) ಅಡಿ ಕೋರ್ಟ್ ಗೆ ದೋಷಾರೋಪಣ ಪತ್ರ ಸಲ್ಲಿಸಲಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಸಾಗಿಸಲ್ಪಟ್ಟಂತಹ ಕಬ್ಬಿಣದ ಅದಿರನ್ನು ಜಪ್ತಿ ಮಾಡಿ, ಬೇಲೇಕೇರಿ ಬಂದರಿನಲ್ಲಿ ದಾಸ್ತಾನು ಮಾಡಿಟ್ಟಿದ್ದ ಸುಮಾರು 5 ಲಕ್ಷ ಟನ್ ಕಬ್ಬಿಣದ ಅದಿರನ್ನು ಯಾವುದೇ ಪರವಾನಿಗೆ ಇಲ್ಲದೆ ಸಾಗಣೆ ಮಾಡಿರುವುದಾಗಿ ಅಂಕೋಲಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೂನ್ 8ರಂದು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.
ಬೇಲೇಕೇರಿ ಬಂದರಿನಲ್ಲಿ 4 ಸ್ಟೀವ್ ಡೋರ್ ಕಂಪನಿಗಳು ದಾಸ್ತಾನು ಕಾರ್ಯ ನಿರ್ವಹಿಸುತ್ತಿದ್ದು, ಕಬ್ಬಿಣದ ಅದಿರು ರಫ್ತು ಮಾಡುವ ಕಂಪನಿಗಳೊಂದಿಗೆ ಶಾಮೀಲಾಗಿ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಿಸಿರುವ ಆರೋಪವನ್ನು ಹೊತ್ತಿದ್ದವು.
ಇದೀಗ, ತನಿಖೆಯ ಪ್ರಥಮ ಹಂತವಾಗಿ ಸ್ಟೀವ್ ಡೋರ್ ಸಲಗಾಂವಕರ್ ಮೈನಿಂಗ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಗೆ ಸಂಬಂಧಿಸಿದ ಕಂಪನಿಗಳ ಆರೋಪ ಕುರಿತು ತನಿಖೆ ಪೂರ್ಣಗೊಂಡು, ಡಿ.24ರಂದು ಸಿಐಡಿ ತನಿಖಾಧಿಕಾರಿಗಳು ಅಂಕೋಲಾ ಜೆಎಂಎಫ್ಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದಾರೆ. ಬೇಲೇಕೇರಿ ಅದಿರು ನಾಪತ್ತೆಯಿಂದ ಒಟ್ಟಾರೆ 44 ಕೋಟಿ ರುಪಾಯಿ ನಷ್ಟವಾಗಿತ್ತು.(ಗಣಿಗಾರಿಕೆ)