ಈ ರಸ್ತೆಯಲ್ಲಿ ಇನ್ನೆಷ್ಟು ಜನ ಸಾಯಬೇಕು ?
ಮೃತಪಟ್ಟವರು ಸೋಗಾನೆ ಈಶ್ವರಪ್ಪ(45). ಇವರು ಭಾನುವಾರ ಸಂಜೆ ವಡ್ಡಿನಕೊಪ್ಪ ಸೋಗಾನೆ ಸಂಪರ್ಕಿಸುವ ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಿರುವಾಗ ಸೇತುವೆಯಿಂದ ಸುಮಾರು 12 ಅಡಿ ಅಳಕ್ಕೆ ಬಿದ್ದು ತೀವ್ರತರದ ಗಾಯದಿಂದಾಗಿ ಸಾವನ್ನಪ್ಪಿದ್ದಾರೆ. ಭಾನುವಾರ ಸಂಜೆ ಸುಮಾರು 7 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದರೂ ಸಾವಿನ ಸುದ್ದಿ ಗೊತ್ತಾಗಿದ್ದು ಸೋಮವಾರ ಬೆಳಗಿನ ಜಾವವೆ.
ಕೆಟ್ಟ ರಸ್ತೆಗಳು ಮತ್ತು ಸಾವು ನೋವಿನ ಸುದ್ದಿಯಿಂದ ಆಕ್ರೋಶಗೊಂಡ ಸ್ಥಳೀಯರು ವಡ್ಡಿನಕೊಪ್ಪದಲ್ಲಿ ಪ್ರತಿಭಟನೆ ನಡೆಸಿದರು. ಸೋಗಾನೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ಭಾಗದಲ್ಲಿ ದಿನನಿತ್ಯ 200 ರಿಂದ 300 ವಾಹನಗಳು ಓಡಾಡುತ್ತವೆ. ಆದರೆ ಲೋಕೋಪಯೋಗಿ ಇಲಾಖೆಯ ಮಾನ ಮರ್ವಾದೆ ಇರುವ ಯಾವೊಬ್ಬ ಅಧಿಕಾರಿಯೂ ಇತ್ತ ಕಣ್ಣೆತ್ತಿಕೂಡ ನೋಡಿಲ್ಲ. ದಿನನಿತ್ಯ ಈ ಭಾಗದಲ್ಲಿ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿದೆ. ಹಲವರು ತೀವ್ರವಾಗಿ ಗಾಯಗೊಂಡ ಘಟನೆಗಳೂ ಈ ಹಿಂದೆ ನಡೆದಿವೆ. ಮುಂದೆ ಇನ್ನೂ ಎಷ್ಟು ಜನ ಈ ರಸ್ತೆಯಲ್ಲಿ ಸಾಯಬೇಕು? ಎಂದು ಜನರು ಸರಕಾರವನ್ನು ಕೇಳುತ್ತಾರೆ.
ರಸ್ತೆ ಸಂಪೂರ್ಣ ಹದಗೆಟ್ಟಿದೆ ಎಂದು ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಅಮಾಯಕರೊಬ್ಬರನ್ನು ಬಲಿ ತೆಗೆದು ಕೊಂಡಿದೆ. ಇಷ್ಟೆಲ್ಲಾ ಘಟನೆ ನಡೆದರೂ ಇಲ್ಲಿಯವರೆಗೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಆಗಮಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸ್ಥಳೀಯರಾದ ಆರ್.ವಿಜಯಕುಮಾರ್, ಮುನಿರತ್ನ, ಸೋಗಾನೆ ಮೂರ್ತಪ್ಪ, ರಂಗಸ್ವಾಮಿ ಹಲವರು ಪಾಲ್ಗೊಂಡಿದ್ದರು. [ಅಪಘಾತ]