ಮುಂಬೈ : ಉಗ್ರರ ದಾಳಿ, ಹೈಅಲರ್ಟ್
ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯಿಂದ ಪ್ರಕಾರ, ಲಷ್ಕರ್ ಇ ತೊಯ್ಬಾ ಸಂಘಟನೆಯ ಪ್ರಾಂತೀಯ ಮುಖ್ಯಸ್ಥ ಮೆಹಪೂಜ್ ಅಲಂ ಎಂಬುವವನು ಅಕ್ರಮವಾಗಿ ಮುಂಬೈ ನಗರ ಪ್ರವೇಶಿಸಿದ್ದಾನೆ. ನಂತರ ಇದೀಗ ದೇಶದಿಂದ ಪರಾರಿಯಾಗಲು ಯತ್ನಿಸುತ್ತಿರುವುದರಿಂದ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಭದ್ರತೆ ಒದಗಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಹದ್ದಿನ ಕಣ್ಣಿನ ಕಾವಲು ಇರಿಸಲಾಗಿದ್ದು, ಪ್ರತಿಯೊಬ್ಬ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿದೆ. ಅಲಂ ಸೇರಿದಂತೆ ನಾಲ್ಕು ಉಗ್ರರು ಭಾರತದೊಳಗೆ ನುಸುಳಿದ್ದಾರೆ. ಕ್ರಿಸ್ ಮಸ್ ಗಿಂತ ಮುಂಚೆ ಮುಂಬೈ ಸೇರಿಕೊಂಡಿರುವ ಉಗ್ರರು, ಜನಜಂಗುಳಿ ಇರುವ ಪ್ರದೇಶಗಳ ಮೇಲೆ ಗುರಿ ಇರಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಹೊಸ ವರ್ಷ ಆಚರಣೆ ವೇಳೆ ಭಯೋತ್ಪಾದನೆ ನಡೆಸುವ ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಮುಂಬೈ ನಗರದಲ್ಲಿರುವ ಪ್ರತಿಯೊಂದು ಪಾರ್ಕ್, ಹೊಸ ವರ್ಷ ಆಚರಿಸುವ ವಿಶೇಷ ಸ್ಥಳಗಳಲ್ಲಿ ಬಾಂಬ್ ನಿಷ್ಕ್ರೀಯ ದಳವನ್ನು ನಿಯೋಜಿಸಿಲಾಗಿದೆ ಎಂದು ಮುಂಬೈ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರನ ರೇಖಾಚಿತ್ರ ಬಿಡುಗಡೆಗೊಳಿಸಿರುವ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ಸೂಚನೆ ನೀಡಿದ್ದಾರೆ. ಉಗ್ರರ ಸುಳಿವು ದೊರೆತಲ್ಲಿ ಕೂಡಲೇ 022-2263 3333 ತಿಳಿಸಬೇಕೆಂದು ಮುಂಬೈ ಭಯೋತ್ಪಾದನಾ ನಿಗ್ರಹ ದಳ ತಿಳಿಸಿದೆ.
ರಾಜ್ಯದಲ್ಲೂ ಕಟ್ಟೆಚ್ಚರ : ಲಷ್ಕರ್ ಇ ತೊಯ್ಬಾ ಸಂಘಟನೆ ಉಗ್ರರು ಮುಂಬೈ ಪ್ರವೇಶದಿಂದ ಮುಂಜಾಗ್ರತಾ ಕ್ರಮಗಳನ್ನು ಕರ್ನಾಟಕದಲ್ಲೂ ತೆಗೆದುಕೊಳ್ಳಲಾಗಿದ್ದು, ಕರಾವಳಿ ಪ್ರದೇಶದಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಪೊಲೀಸ್ ಇಲಾಖೆ ಸೂಚನೆ ನೀಡಿದ್ದಾರೆ. (ಭಯೋತ್ಪಾದನೆ)