ಭಂಡನಲ್ಲ ನನ್ನ ಗಂಡ : ತೇಜಸ್ವಿನಿ ಅನಂತ್ ಕುಮಾರ್
ಸಿಬಿಐನಿಂದ ತನಿಖೆಯಾಗಿ ಆರೋಪಗಳಿಂದ ಮುಕ್ತರಾಗುವವರೆಗೆ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ರಾಜ್ಯದ ಕಾಂಗ್ರೆಸ್ ನಾಯಕರೆಲ್ಲ ಆಗ್ರಹಿಸುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿಯೂ ಇದರ ಬಗ್ಗೆ ಹುಯಿಲೆದ್ದಿದ್ದರೂ ಅನಂತ್ ಕುಮಾರ್ ಮೌನವಾಗಿದ್ದರೆ, ಅವರ ಹೆಂಡತಿ ತೇಜಸ್ವಿನಿ ಅನಂತ್ ಕುಮಾರ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ ಪದವಿ ಪಡೆದು, ಎಡಿಎ ಸಂಸ್ಥೆಯಲ್ಲಿ ವಿಜ್ಞಾನಿಯಾಗಿದ್ದ ತೇಜಸ್ವಿನಿ, ಮಾಧ್ಯಮದವರೊಂದಿಗೆ ಮಾತನಾಡುತ್ತ, 2ಜಿ ತರಂಗಗುಚ್ಛ ಮತ್ತು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ನಡೆದ ಹಗರಣಗಳಲ್ಲಿ ಭಾಗಿಯಾಗಿರುವ ಕಾಂಗ್ರೆಸ್, ದೇಶದ ದಾರಿ ತಪ್ಪಿಸಲು ಬಿಜೆಪಿ ನಾಯಕರನ್ನು ಅನವಶ್ಯಕವಾಗಿ ಗುರಿಮಾಡುತ್ತಿದ್ದಾರೆ ಎಂದು ಆರೋಪಿಸಿದರು.
2ಜಿ ತರಂಗಗುಚ್ಛ ಹಗರಣವನ್ನು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯಾಗಬೇಕೆಂದು ಆಗ್ರಹಿಸುತ್ತಿದ್ದವರಲ್ಲಿ ಅನಂತ್ ಅಗ್ರಗಣ್ಯರು. ಇದನ್ನು ಸಹಿಸದ ಕಾಂಗ್ರೆಸ್ ನಾಯಕು ಅನಂತ್ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇಂಥ ನಿರಾಧಾರ ಆರೋಪಗಳಿಂದ ಜನರನ್ನು ಮೂರ್ಖರನ್ನಾಗಿ ಮಾಡಲು ಕಾಂಗ್ರೆಸ್ಸಿಗೆ ಸಾಧ್ಯವಿಲ್ಲ ಎಂದು ಅವರು ಹರಿಹಾಯ್ದರು.
ಅದಮ್ಯ ಚೇತನ, ಆರೋಗ್ಯ ಚೇತನ, ಶಿಕ್ಷಕ ಚೇತನ, ಆಟ-ಪಾಠ, ರಕ್ತದಾನ್ ಮುಂತಾದ ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ತೇಜಸ್ವಿನಿಯವರು ಅನಂತ್ ಕುಮಾರ್ ಅವರ ಹಿಂದಿರುವ ಅನಂತ ಶಕ್ತಿ ಎಂದರೂ ತಪ್ಪಾಗಲಾರದು. [2ಜಿ ಹಗರಣ]