ಜಿಪಂ ಚುನಾವಣೆ : 12 ಜಿಲ್ಲೆಗಳಲ್ಲಿ ಶಾಂತಿಯುತ ಮತದಾನ
ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಹಲವಡೆ ಮತದಾನ ಬಹಿಷ್ಕಾರ, ಅಲ್ಲಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ, ಮತಪಟ್ಟಿಯಲ್ಲಿ ಹೆಸರು ನಾಪತ್ತೆ, ಮತಗಟ್ಟೆಗೆ ಬೀಗ ಜಡಿದು ಪ್ರತಿಭಟನೆ ಸೇರಿದಂತೆ ಹಲವು ಗೊಂದಲ-ಗೋಜಲುಗಳು, ಲಘು ಲಾಠಿಜಾರ್ಜ್ ನಡುವೆ ಪ್ರಥಮ ಹಂತದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಬಹುತೇಕ ಶಾಂತಿಯುತ- ಇದು ಇಂದಿನ ಮತದಾನದ ಹೈಲೈಟ್ಸ್
ಚುನಾವಣೆ ಎಣ್ಣೆಗೆ ಬಲಿ? : ತುಮಕೂರು ಜಿಲ್ಲೆಯ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನರಸಿಂಹಯ್ಯ ಎಂಬ ವ್ಯಕ್ತಿ ವಿಪರೀತ ಮದ್ಯಪಾನ ಮಾಡಿ ಸಾವಿಗೀಡಾಗಿದ್ದಾರೆ. ಚುನಾವಣೆಗೆ ಹಂಚಿದ್ದ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಅಧಿಕಾರಿಗಳ ಮಾತ್ರ ವಯಸ್ಸಾಗಿದ್ದರಿಂದ ನರಸಿಂಹಯ್ಯ ಸಾವಿಗೀಡಾಗಿದ್ದಾನೆ ಎಂದು ಹೇಳಿದ್ದಾರೆ. ಚಿಂತಾಮಣಿ ತಾಲ್ಲೂಕಿನ ಗಡಿಗವಾರಹಳ್ಳಿಯಲ್ಲಿ ಮರುಮತದಾನಕ್ಕೆ ಆಗ್ರಹಿಸಿ ಮಾಜಿ ಶಾಸಕ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ. ಇಬ್ಬರಿಗೆ ಗಾಯ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೂಗ್ಗ, ತಮಕೂರು, ಬೀದರ್, ಬಳ್ಳಾರಿ, ರಾಯಚೂರು, ಯಾದಗಿರಿ ಸೇರಿದಂತೆ 12 ಜಿಲ್ಲೆಗಳ 375 ಸ್ಥಾನಗಳ ಹಾಗೂ 1341 ಸ್ಥಾನಗಳಿಗೆ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು.
ಒಂದು ಜಿಪಂ ಹಾಗೂ 6 ತಾಪಂ ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಡಕಮಾರನಹಳ್ಳಿಯಲ್ಲಿ ಶಾಸಕ ನಂದೀಶ್ ರೆಡ್ಡಿ ಕಾಣಿಸಿಕೊಂಡು ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಜೆಡಿಎಸ್ ಮುಖಂಡ ಇ ಕೃಷ್ಣಪ್ಪ ಮಾಡಿದ ಆರೋಪ ಮಾತಿನ ಚಕಮಕಿಗೆ ಕಾರಣವಾಯಿತು.
ಬಹಿಷ್ಕಾರ : ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ಕೋಡಿಹಳ್ಳಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು. ಅದೇ ರೀತಿ ಯಾದಗಿರಿ ಜಿಲ್ಲೆಯ ಬಪ್ಪರಗಾ ಗ್ರಾಮದಲ್ಲಿ ರಸ್ತೆ ಸರಿ ಇಲ್ಲ ಎಂದು ಆರೋಪಿಸಿ ಮತದಾನಕ್ಕೆ ಅಡ್ಡಿ. ತುರುವೇಕೆರೆ ತಾಲ್ಲೂಕಿನ ದೊಡ್ಡಟ್ಟಿ, ಶಿವಮೂಗ್ಗ ಜಿಲ್ಲೆಯ ಅರೋಂಬಳ್ಳಿ, ಶ್ರೀನಿವಾಸಪುರದ ತಾಲ್ಲೂಕು ಯಲ್ದೂರು, ಲಿಂಗಸೂಗೂರು ತಾಲ್ಲೂಕಿನ ಅನ್ವರಿ ಗ್ರಾಮ, ದೇವದುರ್ಗದ ಮಸ್ಕಲ್, ಡೊಂಬಳ್ಳಿ, ತೀರ್ಥಹಳ್ಳಿ ತಾಲ್ಲೂಕು ಲಿಂಗಾಪುರದಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಮತದಾನ ಕೊಂಚ ವಿಳಂಬವಾಗಿತ್ತು.
ಮತ್ತೊಂದು ವಿಶೇಷ ಬಳ್ಳಾರಿಯ ಜಿಲ್ಲಾ ಪಂಚಾಯಿತಿ ಮತಕ್ಷೇತ್ರವೊಂದರಲ್ಲಿ ಜೆಡಿಎಸ್ ಚಿಹ್ನೆ ಸಮಾಜವಾದಿ ಪಕ್ಷದ ಅಭ್ಯರ್ಥಿಗೆ, ಸಮಾಜವಾದಿ ಅಭ್ಯರ್ಥಿಗೆ ಜೆಡಿಎಸ್ ಚಿಹ್ನೆ ಅದಲು ಬದಲಾಗಿದ್ದರಿಂದ ಮತದಾನವನ್ನು ಡಿ 31 ಕ್ಕೆ ಮುಂದೂಡಲಾಗಿದೆ. ಇದನ್ನು ಸ್ವತ ಬಳ್ಳಾರಿ ಜಿಲ್ಲಾಧಿಕಾರಿ ಬಿ ಶಿವಪ್ಪ ಸ್ಪಷ್ಟಪಡಿಸಿದ್ದಾರೆ. (ಜಿಲ್ಲಾ ಪಂಚಾಯತಿ ಚುನಾವಣೆ)