ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಮದ್ಯ ವಶ
ಚುನಾವಣಾಧಿಕಾರಿಗಳು ಅಕ್ರಮ ಮದ್ಯ ಹಂಚುವಿಕೆ ಇನ್ನಿತರೆ ಆಮಿಷಗಳನ್ನೊಡ್ಡಿ ಮತದಾರರನ್ನು ಸೆಳೆಯುವ ಅಭ್ಯರ್ಥಿಗಳ ಬಗ್ಗೆ, ಪಕ್ಷದ ಕಾರ್ಯ ವೈಖರಿ ಬಗ್ಗೆ ನಿಗಾಯಿಟ್ಟಿದ್ದು, ಆದರೂ ಎಲ್ಲರ ಕಣ್ಣು ತಪ್ಪಿಸಿ ಮತದಾರರಿಗೆ ಮದ್ಯ ಹಂಚಿ ಮತ ಕೇಳುವ ಕಾರ್ಯಕ್ಕೆ ಕೆಲವರು ಮುಂದಾಗಿರುವುದು ಕಂಡು ಬಂದಿದೆ. ಈ ನಡುವೆ ಮತದಾರರಿಗೆ ಹಂಚಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸಾವಿರಾರು ರೂಪಾಯಿ ಮೌಲ್ಯದ ಮದ್ಯವನ್ನು ಕುಶಾಲನಗರ ಪೊಲೀಸರು ವಶ ಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
ಸಮೀಪದ ಮುಳ್ಳುಸೋಗೆ ಗ್ರಾ.ಪಂ.ಉಪಾಧ್ಯಕ್ಷ ಎಂ.ಎಸ್.ಶಿವಾನಂದ ಎಂಬುವರ ಸಹೋದರ ಎಂ.ಎಸ್. ಕುಮಾರ ಬಂಧಿತ ಆರೋಪಿಯಾಗಿದ್ದಾನೆ. ಈತ ಮತದಾರರಿಗೆ ಹಂಚಲು ಮದ್ಯವನ್ನು ಮನೆಯೊಂದರಲ್ಲಿ ಶೇಖರಿಸಿಟ್ಟಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಸೋಮವಾರಪೇಟೆ ವಿಭಾಗದ ಡಿವೈಎಸ್ಪಿ ಜಯಪ್ರಕಾಶ್ ಅಕ್ಕರಕಿ ನೇತೃತ್ವದಲ್ಲಿ ಸಂಚಾರಿ ಠಾಣಾಧಿಕಾರಿ ನಾಗೇಶ್ ಮತ್ತು ಸಿಬ್ಬಂದಿಗಳು ಮಧ್ಯರಾತ್ರಿಯ ಸಮಯದಲ್ಲಿ ದಾಳಿ ಮಾಡಿ ಹಾರಂಗಿ ರಸ್ತೆಯಲ್ಲಿರುವ ಮನೆಯೊಂದರಲ್ಲಿದ್ದ ಸುಮಾರು 30 ಸಾವಿರ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.