ಬಿಎಸ್ ವೈ ಸರ್ಕಾರ ತುಘಲಕ್ ಸರ್ಕಾರ: ಬೆಂಕಿ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಹಗರಣಗಳನ್ನು ಮಾಡುತ್ತಲೇ ಇದೆ. ಇಷ್ಟೆಲ್ಲಾ ಹಗರಣಗಳು ನಡೆದರೂ ಮುಖ್ಯ ಮಂತ್ರಿಗಳು ತಮ್ಮ ಸ್ಥಾನವನ್ನು ತ್ಯಜಿಸದೆ ಮುಂದುವರೆದಿದ್ದಾರೆ. ಹೀಗಾಗಿ, ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದೇ ತಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ವೀರಶೈವರಗೆ ಉಳಿಗಾಲವಿಲ್ಲ:ವೀರಶೈವ ಪಂಗಡಗಳ ಒಳಪಂಗಡಗಳನ್ನು ಒಡೆಯು ವಂತಹ ಕೆಲಸಗಳನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ರಲ್ಲದೇ, ಬಸವಣ್ಣನವರ ತತ್ವವನ್ನು ನಂಬಿರುವಂತಹ ವೀರಶೈವ ಪಂಗಡ ದವರು ಯಾರೂ ಇವರ ನೀತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಮುಖ್ಯ ಮಂತ್ರಿಗಳ ಮೇಲೆ ಹರಿಹಾಯ್ದರು.
ಇಂದು ಬೆಳಿಗ್ಗೆ ಜೆಡಿಎಸ್ ಕಛೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂತಹ ಭ್ರಷ್ಟ ಮುಖ್ಯಮಂತ್ರಿಯನ್ನು ನಾಡು ಹಿಂದೆಂದೂ ಕಂಡಿರಲಿಲ್ಲ. ಸ್ವಾತಂತ್ರ್ಯ ಬಂದ ನಂತರ ರಾಜ್ಯ ಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿಯ ಪಟ್ಟ ಬಿ.ಎಸ್.ಯಡಿಯೂರಪ್ಪರಿಗೆ ಸಲ್ಲುತ್ತದೆ ಎಂದು ಹರಿಹಾಯ್ದರು.
ಶ್ರೀಸಾಮಾನ್ಯರ ತೆರಿಗೆ ಹಣವನ್ನು ಮಠ ಮಾನ್ಯಗಳಿಗೆ ನೀಡುತ್ತಿದ್ದು, ಮಠಾಧೀಶರಾರು ಅನುದಾನ ಕೊಡಿ ಎಂದು ಅರ್ಜಿ ಹಾಕಿರಲಿಲ್ಲ. ಕೆಲವೇ ಮಠಗಳಿಗೆ ಮುಖ್ಯಮಂತ್ರಿಗಳು ಅನುದಾನ ನೀಡಿದ್ದು, ಮಠಾಧಿಪತಿಗಳು ಇಂತಹ ಪಾಪದ ಹಣವನ್ನು ತೆಗೆದುಕೊಳ್ಳ ಬಾರದು ಎಂದರು.
ಬಿಎಸ್ ವೈ ಸಮಾಜಕ್ಕೆ ಕಳಂಕ:ಹಿಂದಿನ ವೀರಶೈವ ಜನಾಂಗದವರಾದ ನಿಜಲಿಂಗಪ್ಪ, ಬೀ.ಡಿ.ಜತ್ತಿ, ಜೆ.ಹೆಚ್.ಪಟೇಲ್ ಸೇರಿದಂತೆ ಹಲವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಇವರು ಯಾರು ಈ ರೀತಿಯ ಆಡಳಿತ ನಡೆಸಿರಲಿಲ್ಲ. ಮುಖ್ಯಮಂತ್ರಿಗಳು ಮಾಡುತ್ತಿರುವ ಭ್ರಷ್ಟಾಚಾರದಿಂದಾಗಿ ಇಡೀ ವೀರಶೈವ ಸಮಾಜಕ್ಕೆ ಕಳಂಕ ಬಂದೊದಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಜೆಡಿಎಸ್ ಪಕ್ಷಕ್ಕೆ ಜನಬೆಂಬಲ ಸಿಕ್ಕಿದೆ ಎಂದ ಅವರು, 2011ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಜೆಡಿಎಸ್ಗೆ ಸ್ಪಷ್ಟ ಬಹುಮತ ದೊರಕುವುದರ ಜೊತೆಗೆ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗೆ ಆಗುತ್ತಾರೆ ಎಂದು ಭವಿಷ್ಯ ನುಡಿದರು. ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್, ಮುಖಂಡರಾದ ಜಿ.ಮಾದಪ್ಪ, ಪ.ರಾ.ಶ್ರೀನಿವಾಸ್, ಶಿವಣ್ಣ ಹಲವರು ಉಪಸ್ಥಿತರಿದ್ದರು.