ರಾಷ್ಟ್ರ ರಾಜಕಾರಣದತ್ತ ಯಡಿಯೂರಪ್ಪ ಚಿತ್ತ
ಶಿಕಾರಿಪುರದ ಮಂಗಳಭವನದಲ್ಲಿ ಮಾತನಾಡಿದ ಅವರು, ಸಿಎಂ ಅಧಿಕಾರಾವಧಿ ಪೂರ್ಣಗೊಂಡ ನಂತರ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆ. ರಾಜ್ಯಸಭೆ ಸದಸ್ಯನಾಗುವ ಆಸೆ ಇದೆ. ಈಗಾಗಲೇ ಈ ಸಂಬಂಧ ಪಕ್ಷದ ರಾಷ್ಟ್ರ ಹಾಗೂ ರಾಜ್ಯ ನಾಯಕರೊಂದಿಗೆ ಚರ್ಚೆ ಮಾಡಿದ್ದೇನೆ. ಅವರು ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನ ತುಂಬಲು ರಾಜ್ಯದಲ್ಲಿ ಅನೇಕ ಮಂದಿ ಸಮರ್ಥರಿದ್ದಾರೆ. ಈ ಪೈಕಿ ಯಾರು ಭವಿಷ್ಯದ ನಾಯಕ ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಹಲವು ದಶಕಗಳ ಅವಧಿಯಲ್ಲಿ ಪಕ್ಷ ಬಹಳಷ್ಟು ಮಂದಿ ನಾಯಕರನ್ನು ತಯಾರು ಮಾಡಿದೆ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ನಾಯಕತ್ವದ ಕೊರತೆ ಇಲ್ಲ ಎಂದು ಅವರು ವಿವರಿಸಿದರು.
ಜಿ.ಪಂ.-ತಾ.ಪಂ. ಚುನಾವಣೆ ಮುಕ್ತಾಯವಾದ ನಂತರ ರಾಜ್ಯಾದ್ಯಂತ ಪ್ರವಾಸ ನಡೆಸಲಾಗುವುದು. ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಸಂಘಟನೆ ಮಾಡಲಾಗುವುದು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲಾಗುವುದು ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.