ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗೆ ಯಡ್ಡಿ ಫಿರ್ಯಾದು
ಭ್ರಷ್ಟ ಸಚಿವರ ಪಟ್ಟಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ರವಾನಿಸಿರುವ ರಾಜ್ಯಪಾಲರು ಅವರ ವಿರುದ್ಧ ಏನು ಕ್ರಮ ಕೈಗೊಂಡಿರುವುದಾಗಿ ಪ್ರಶ್ನಿಸಿದ್ದು ಯಡಿಯೂರಪ್ಪನವರ ಆಕ್ರೋಶಕ್ಕೆ ಮುಖ್ಯ ಕಾರಣ. ರಾಜ್ಯಪಾಲರು ಸರಕಾರದಲ್ಲಿ ಮೇಲಿಂದ ಮೇಲೆ ಮೂಗು ತೂರಿಸುತ್ತಿದ್ದು, ಈ ಕುರಿತಾಗಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬಂದಿರುವ ಯಡಿಯೂರಪ್ಪ ಮಾಧ್ಯಮ ಪ್ರತಿನಿಧಿಗಳೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.
ರಾಜ್ಯಪಾಲರ ಈ ವರ್ತನೆಯನ್ನು ವಿರೋಧಿಸಿ ನಾಳೆಯೇ ರಾಷ್ಟ್ರಪತಿ ಪ್ರತಿಭಾ ಪಾಟೀಲ್ರವರಿಗೆ ಪತ್ರ ಬರೆಯುವುದಾಗಿ ಯಡಿಯೂರಪ್ಪ ತಿಳಿಸಿದರು. ಪತ್ರಕ್ಕೆ ವಿವರಣೆ ಕೊಟ್ಟಿದ್ದರೂ ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭ್ರಷ್ಟ ಅಧಿಕಾರಿಗಳ ಪಟ್ಟಿ ರಾಜ್ಯಪಾಲರು ತಯಾರಿಸಿದ್ದರ ಕುರಿತಂತೆ ಮೇಲೆ ಕೇಳಿರುವ ಪ್ರಶ್ನೆಗಳನ್ನು ರಾಷ್ಟ್ರಪತಿಗಳನ್ನೇ ಕೇಳುವುದಾಗಿ ಅವರು ತಿಳಿಸಿದರು.
ಕೇಂದ್ರ ಕಾನೂನು ಸಚಿವ ಮೊಯ್ಲಿಯವರು ರಾಜ್ಯಪಾಲರನ್ನು ಭೇಟಿಯಾಗಿ ಚರ್ಚಿಸಿರುವ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಚುನಾವಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮೇಲೆ ಕೆಟ್ಟ ಪರಿಣಾಮ ಬೀರುವ ಹುನ್ನಾರವಿದು ಎಂದು ಆರೋಪಿಸಿದರು. ಅಲ್ಲದೇ, ರಾಜ್ಯ ಸರ್ಕಾರದ ಬಗ್ಗೆ ಸೋನಿಯಾ ಗಾಂಧಿಯವರಿಗೆ ಸಲ್ಲದ ಹೇಳಿಕೆಗಳನ್ನು ಹೇಳಿ ತಪ್ಪು ಸಂದೇಶವನ್ನು ಮೊಯ್ಲಿಯವರು ಕಳುಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಭಾವನೆ ಹೊರಹಾಕಿದ್ದೇನೆ : ರಾಷ್ಟ್ರ ರಾಜಕಾರಣದತ್ತ ಒಲವು ತೋರಿದ್ದೀರಲ್ಲಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಹೈಕಮಾಂಡ್ಗೆ ನನ್ನ ಭಾವನೆಯನ್ನು ಹೊರಹಾಕಿದ್ದೇನೆ. ರಾಷ್ಟ್ರ ರಾಜಕಾರಣಕ್ಕೆ ನನ್ನನ್ನು ತೊಡಗಿಸಿಕೊಳ್ಳಲು ವರಿಷ್ಠರು ಮುಂದೆ ತೀರ್ಮಾನಿಸುತ್ತಾರೆ ಎಂದರು.
ಎಸ್ಎಂ ಕೃಷ್ಣ ಆಕ್ರೋಶ : ತಮ್ಮ ಕಾಲಾವಧಿಯಲ್ಲಿ ನಡೆದಿದೆ ಎನ್ನಲಾಗಿರುವ ನಿವೇಶನಗಳ ಡಿನೋಟಿಫಿಕೇಷನ್ ಕುರಿತಂತೆ ಯಡಿಯೂರಪ್ಪನವರು ಸತ್ಯವನ್ನು ಮರೆಮಾಚುತ್ತಿದ್ದು, ತಮ್ಮ ವ್ಯಕ್ತಿತ್ವಕ್ಕೆ ಕಪ್ಪು ಹಚ್ಚುವ ಉದ್ದೇಶದಿಂದ ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪನವರನ್ನು ಉದ್ದೇಶಿಸಿ ಅವರು ಬರೆದಿರುವ ನಾಲ್ಕು ಪುಟಗಳ ಪತ್ರದಲ್ಲಿ, ಅವರು ಮಾಡಿರುವ ಆಧಾರರಹಿತ ಆರೋಪಗಳು ಚಾರಿತ್ರ್ಯವಧೆಯಲ್ಲದೆ ಮತ್ತೇನು ಅಲ್ಲ ಎಂದು ಕೃಷ್ಣ ತಿಳಿಸಿದ್ದಾರೆ. [ಬಿಎಸ್ ಯಡಿಯೂರಪ್ಪ]