2ಜಿ ಹಗರಣ : ಪಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ
ಇಲ್ಲಿನ ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಯುಪಿಎ ಸರಕಾರದ ಭ್ರಷ್ಟಾಚಾರವನ್ನು ಎನ್ ಡಿಎದ ಪ್ರಮುಖ ಅಂಗ ಪಕ್ಷ ಬಿಜೆಪಿ ಹಾಗೂ ಮಿತ್ರ ಪಕ್ಷಗಳು ತೀವ್ರ ಟೀಕಾ ಪ್ರಹಾರ ನಡೆಸಿದವು. ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ, ರಾಜ್ಯಸಭಾ ಸದಸ್ಯ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಜೈಟ್ಲಿ, 2 ಜಿ ಸ್ಪೆಕ್ಟ್ರಂ ಹಗರಣ ಶತಮಾನದ ದೊಡ್ಡ ಹಗರಣ. ಇಂತಹ ಹಗರಣದ ಸಮಗ್ರ ತನಿಖೆ ಖಂಡಿತಾ ಆಗಬೇಕು. ಆದರೆ, ಆಡಳಿತರೂಢ ಕಾಂಗ್ರೆಸ್ ನೇತೃತ್ವದ ಕಾಂಗ್ರೆಸ್ ಪಕ್ಷ ಹಗರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಜಂಟಿ ಸಂಸದೀಯ ಸಮಿತಿಗೆ ಹಗರಣವನ್ನು ತನಿಖೆಗೆ ನೀಡಿದರೆ, ಸರಕಾರದ ಬಣ್ಣ ಬಯಲಾಗಲಿದೆ ಎಂಬ ಭಯದಿಂದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಜಂಟಿ ಸಂಸದೀಯ ಸಮಿತಿ ವಹಿಸಲು ಹಿಂಜರಿಯುತ್ತಿದ್ದಾರೆ. ಜಂಟಿ ಸಂಸದೀಯ ತನಿಖೆಯಿಂದಲೇ ಮಾತ್ರ ಹಗರಣದ ಸತ್ಯಾಸತ್ಯತೆ ಹೊರಬರಲಿದೆ. ಆದ್ದರಿಂದ ಜಂಟಿ ಸಂಸದಿಯ ಸಮಿತ ರಚಿಸದಿದ್ದರೆ, ನೈತಿಕ ಹೊಣೆ ಹೊತ್ತು ಪ್ರಧಾನಮಂತ್ರಿ ಸ್ಥಾನಕ್ಕೆ ಮನಮೋಹನ್ ಸಿಂಗ್ ರಾಜೀನಾಮೆ ನೀಡಲೇಬೇಕು ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಒತ್ತಾಯಿಸಿದ್ದಾರೆ.
2 ಜಿ ಸ್ಪೆಕ್ಟ್ರಂ ಹಗರಣದಲ್ಲಿ ಅನೇಕ ಪ್ರಮುಖ ನಾಯಕರು ಭಾಗಿಯಾಗಿದ್ದಾರೆ. ಮುಖ್ಯವಾಗಿ ಯುಪಿಎ ಸರಕಾರ ಉದ್ಯಮಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದು ಗೊತ್ತಿರುವ ಸಂಗತಿ. ಒಬ್ಬ ಕಾರ್ಪೋರೇಟ್ ಕಂಪನಿಯ ಮುಖ್ಯಸ್ಥೆಯಿಂದ 2ಜಿ ಸ್ಪೆಕ್ಟ್ರಂನ ಅನುಮತಿ ನೀಡಲಾಗಿದೆ ಎಂದರೆ ಸರಕಾರ ಯಾವ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದು ತಿಳಿಯಲಿದೆ. ಮಾಜಿ ಮಂತ್ರಿ ಎ ರಾಜಾ ಅವರ ರಾಜೀನಾಮೆ ಪಡೆದರೆ ಸಾಲದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಹೀಗಾಗಿ ಹಗರಣದಲ್ಲಿ ಏನೆನಲ್ಲಾ ನಡೆದಿದೆ ಎನ್ನುವುದು ಸಾರ್ವಜನಿಕರಿಗೆ ಗೊತ್ತಾಗಬೇಕು. ಇದರಿಂದ ಜಂಟಿ ಸಂಸದೀಯ ತನಿಖೆಗೆ ಸರಕಾರ ಒಪ್ಪಿಗೆ ಸೂಚಿಸಲೇಬೇಕು ಎಂದು ಪ್ರತಿಪಕ್ಷದ ನಾಯಕಿ ಸುಷ್ಮಾಸ್ವರಾಜ್ ಆಗ್ರಹಿಸಿದ್ದಾರೆ.
ಎ ರಾಜಾ ಹಾಗೂ ಕಾರ್ಪೋರೇಟ್ ಮುಖ್ಯಸ್ಥೆ ನೀರಾ ರಾಡಿಯಾ ಮೇಲೆ ಸಿಬಿಐ ದಾಳಿ ನಡೆಸಲಾಗಿದೆ. ಇದು ಬರೀ ಕಣ್ಣೀರು ಒರೆಸುವ ತಂತ್ರವಾಗಿದೆ. ಸರಕಾರ ತಪ್ಪೆ ಮಾಡದಿದ್ದರೆ ಸಂಸದೀಯ ಸಮಿತಿ ರಚನೆ ಮಾಡಲು ಹಿಂದೇಟು ಹಾಕುತ್ತಿರುವುದು ಏಕೆ? ಸಿಬಿಐ ತನಿಖೆ ಜೊತೆಗೆ ಜಂಟಿ ಸಂಸದೀಯ ಸಮಿತಿ ರಚಿಸಿ, ಅದರಿಂದಲೂ ತನಿಖೆ ಆಗಲಿ ಎಂದು ಸುಷ್ಮಾಸ್ವರಾಜ್ ಹೇಳಿದ್ದಾರೆ.
ಕರ್ನಾಟಕದಲ್ಲಿ ನಡೆದಿರುವ ಭೂ ಹಗರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿಯಾಗಿರುವುದನ್ನು ಕಾಂಗ್ರೆಸ್ ನಾಯಕರು ಕಟುವಾಗಿ ಟೀಕಿಸಿದ್ದರು. ಲೋಕಸಭೆ ಮತ್ತು ರಾಜ್ಯಸಭೆಯ ಚಳಗಾಲದ ಅಧಿವೇಶನ ಸಂಪೂರ್ಣ ಹಗರಣದ ಕೂಪವಾಗಿ ಹೋಗಿದೆ. ಈ ಅಧಿವೇಶನದಲ್ಲಿ ಯಾವುದೇ ಗುರುತರವಾದ ಕ್ರಮ ಕೈಗೊಳ್ಳಲು ಸರಕಾರ ವಿಫಲವಾಗಿದೆ.