ಬೀದಿ ವ್ಯಾಪಾರಕ್ಕೆ ಮುಕ್ತಿ ಫುಡ್ ಕೋರ್ಟ್ ಗೆ ಜೈ: ಡಿಸಿ
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಗರದ ಬಹುತೇಕ ರಸ್ತೆಗಳಲ್ಲಿ ಈ ರೀತಿಯ ತಿಂಡಿ ಗಾಡಿಗಳ ವ್ಯಾಪಾರ ಹೆಚ್ಚಾಗಿರುವುದನ್ನು ನೋಡಬಹುದಾಗಿದೆ. ಆದರೆ 30ಅಡಿಗಿಂತ ಕಡಿಮೆ ಇರುವಂತಹ ರಸ್ತೆಗಳಲ್ಲಿ ಈ ರೀತಿಯ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶ ನೀಡಿದ್ದು, ಅದರಂತೆ ಕಸ್ತೂರರ್ಬಾ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ತಿಂಡಿ ಗಾಡಿಗಳಿಗೆ ಬೇರೆ ಕಡೆ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ ಎಂದರು.
ಆರೋಗ್ಯಕ್ಕೆ ಸ್ವಚ್ಛತೆಗೆ ಆದ್ಯತೆ: ಕಸ್ತೂರರ್ಬಾ ರಸ್ತೆಯಲ್ಲಿ ತಿಂಡಿ ಗಾಡಿಗಳಿಗೆ ಬೇರೆ ಕಡೆ ವ್ಯಾಪಾರ ಮಾಡಲು ಹತ್ತು- ಹದಿನೈದು ದಿನಗಳ ಕಾಲಾವಕಾಶ ನೀಡಲಾಗಿದೆ. ಏಕೆಂದರೆ ಈ ರಸ್ತೆಯಲ್ಲಿ ಶಿಕ್ಷಣ ಸಂಸ್ಥೆಗಳಿವೆ. ನಗರಸಭೆ ಇದೆ, ಇದರ ಜೊತೆಗೆ ಗಾಂಧಿ ಪಾರ್ಕ್ ಕೂಡ ಇದ್ದು, ಇಲ್ಲಿ ಪ್ರತಿನಿತ್ಯ ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುತ್ತಾರೆ ಇದರಿಂದಾಗಿ ಈ ರಸ್ತೆಯಲ್ಲಿ ಸಾಕಷ್ಟು ಅನಾನುಕೂಲಗಳು ಉಂಟಾಗಿದ್ದು, ಸ್ವಚ್ಛತೆ ಸಂಪೂರ್ಣ ಹಾಳಾಗಿದೆ. ಸ್ವಚ್ಛತೆ ಕಾಪಾಡಲು ಆಗುತ್ತಿಲ್ಲ. ಹೀಗಾಗಿ ತಿಂಡಿ ಗಾಡಿಗಳ ಮಾಲೀಕರುಗಳಿಗೆ ಈ ರಸ್ತೆಯನ್ನು ಬಿಟ್ಟು ಬೇರೆ ಕಡೆ ಶಾಶ್ವತ ಪರಿಹಾರ ಕಲ್ಪಿಸಲು ಯೋಜನೆ ಮಾಡುತ್ತೇವೆ. ಇದಕ್ಕಾಗಿ ಸೂಕ್ತ ಜಾಗ ಪರಿಶೀಲನೆ ಮಾಡಬೇಕಾಗಿದೆ ಎಂದು ಹೇಳಿದರು.
ಘಟನೆಯೊಂದನ್ನು ನೆನೆಪಿಸಿಕೊಂಡ ಅವರು, ಅಲ್ಲಿನ ತಿಂಡಿ ಗಾಡಿಗಳ ವ್ಯಾಪಾರಸ್ಥರು ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಪೊಲೀಸರಿಗೆ ಈ ರೀತಿಯ ಪರಿಸ್ಥಿತಿ ಇದೆ ಎಂದರೆ ಇನ್ನು ಸಾರ್ವಜನಿಕರಿಗೆ ಎಷ್ಟು ತೊಂದರೆ ಇದೆ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಫುಡ್ಕೋರ್ಟ್ ತೆರೆಯಲು ಜಿಲ್ಲಾಡಳಿತ ಯೋಚಿಸುತ್ತಿದೆ ಎಂದರು.
ಸದ್ಯಕ್ಕೆ ಕಸ್ತೂರಬಾ ರಸ್ತೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿ ಕೊಡಲಾಗಿದ್ದು, ಸಂಜೆ 6ಗಂಟೆಯ ನಂತರ ವ್ಯಾಪಾರ ಪ್ರಾರಂಭಿಸಬೇಕು ಮತ್ತು 11 ಗಂಟೆಯೊಳಗೆ ವ್ಯಾಪಾರವನ್ನು ಮುಗಿಸಬೇಕು. ಜೊತೆಗೆ ಪ್ರತಿಯೊಬ್ಬ ತಳ್ಳು ಗಾಡಿಯವರು ಕಸದ ಬುಟ್ಟಿ ಇಡಬೇಕು. ಜೊತೆಗೆ ಕಸದ ಬುಟ್ಟಿಗೆ ಹಾಕಿಸುವ ಜವಾಬ್ದಾರಿ ಮಾಲೀಕರದೇ ಆಗಿದೆ. ಇದನ್ನು ಮೀರಿದರೆ ಅಂಗಡಿಗಳನ್ನು ಅಲ್ಲಿಂದ ಖಾಲಿ ಮಾಡಿಸುವುದಾಗಿ ಹೇಳಿದರು.