ಎನ್ ಕೌಂಟರ್ ನಲ್ಲಿ ಇಬ್ಬರು ರೌಡಿಗಳು ಮಟಾಶ್!
ಯಲಹಂಕದ ಬಳಿಯಿರುವ ಬಾಗಲೂರಿನಲ್ಲಿ ಏಳು ಅತ್ಯಾಚಾರ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಶಂಕರ್ ಎಂಬಾತನನ್ನು ಬೆಳಗಿನ ಜಾವ 4.30ಕ್ಕೆ ಹತ್ಯೆ ಮಾಡಲಾಗಿದೆ. ಆ ಪ್ರದೇಶಕ್ಕೆ ಬರುತ್ತಾನೆಂಬ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ಬಾಗಲೂರಿನಲ್ಲಿ ಹೊಂಚುಹಾಕಿ ಕುಳಿತಿದ್ದರು. ಮೋಟರ್ ಬೈಕಿನಲ್ಲಿ ಸ್ನೇಹಿತನ ಜೊತೆ ಬರುತ್ತಿದ್ದ ಶಂಕರ್ ನನ್ನು ಪೊಲೀಸರು ಅಡ್ಡ ಹಾಕಿದ್ದಾರೆ.
ಆಗ ತನ್ನ ಬಳಿಯಿದ್ದ ಮಚ್ಚಿನ್ನು ಬೀಸಿದ್ದರಿಂದ ಸಬ್ ಇನ್ ಸ್ಪೆಕ್ಟರ್ ಸಿರಾಜುದ್ದಿನ್ ಅವರ ಕೈಗೆ ಗಾಯವಾಗಿದೆ. ಆತ ತಪ್ಪಿಸಿಕೊಳ್ಳಲೆತ್ನಿಸಿದಾಗ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಗುಂಡು ತಗುಲಿ ಗಾಯಗೊಂಡ ಶಂಕರ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ನಂತರ ಮೃತನಾಗಿದ್ದಾನೆ. ಆತನ ಜೊತೆಯಿದ್ದ ಸ್ನೇಹಿತ ಕೂಡ ಗಾಯಗೊಂಡಿದ್ದು ಆತನನ್ನು ಕೋಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಅವರು ಸ್ಥಳಕ್ಕೆ ಭೇಟಿ ನೀಡಿ, ಆನಂತರ ಎನ್ ಕೌಂಟರ್ ವಿವರಗಳನ್ನು ಪತ್ರಕರ್ತರಿಗೆ ನೀಡಿದರು. ರೌಡಿಶೀಟರ್ ದಾಳಿ ಮಾಡಿದಾಗ ಎನ್ ಕೌಂಟರ್ ಮಾಡದೆ ಅನ್ಯ ಮಾರ್ಗವೇ ಇರಲಿಲ್ಲ. ಎಸ್ಐ ಸಿರಾಜುದ್ದಿನ್ ಮೇಲೆ ಆತ ಅಟ್ಯಾಕ್ ಮಾಡಿದ್ದರಿಂದ ಎನ್ ಕೌಂಟರ್ ಮಾಡಲೇಬೇಕಾಯಿತು ಎಂದು ಶಂಕರ್ ಬಿದರಿ ಎನ್ ಕೌಂಟರನ್ನು ಸಮರ್ಥಿಸಿಕೊಂಡರು.
ಮತ್ತೊಂದು ಘಟನೆಯಲ್ಲಿ, ಸುಮಾರು 22 ದರೊಡೆ ಮತ್ತು ಹಣ ಸುಲಿಗೆ ಪ್ರಕರಣಗಳಲ್ಲಿ ಬೆಂಗಳೂರು ಪೊಲೀಸರು ಹುಡುಕುತ್ತಿದ್ದ ಪೆದ್ದಗುಂಡ ಎಂಬಾತನನ್ನು ಪೀಣ್ಯದಲ್ಲಿ ಪೊಲೀಸರು ಕಳೆದ ರಾತ್ರಿ ಎನ್ ಕೌಂಟರ್ ಮಾಡಿ ಹತ್ಯೆ ಮಾಡಿದ್ದಾರೆ. ಪೊಲೀಸರು ಅಟಕಾಯಿಸಿದಾಗ ಆತ ತಪ್ಪಿಸಿಕೊಳ್ಳಲೆತ್ನಿಸಿದ್ದಾನೆ. ಆಗ ಮೂರು ಸುತ್ತು ಗುಂಡು ಹಾರಿಸಲಾಗಿದೆ. ಪೆದ್ದಗುಂಡ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.