ಜೆ ಪಿ ನಗರದಲ್ಲಿ ಹಾಡುಹಗಲೇ ಬಿಪಿಒ ಉದ್ಯೋಗಿ ಕೊಲೆ
ಶುಕ್ರವಾರ (ಡಿ.17)ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಕೊಲೆ ಬೆಳಕಿಗೆ ಬಂದಿದ್ದು ಮಾತ್ರ ಸಂಜೆ 4.30ರ ಸಮಯದಲ್ಲಿ. ಸುರೇಖಾ ಅವರ ಪತಿ ಆನಂದ್ ನಾರಾಯಣ್ ಮಿಶ್ರಾ ಅಸ್ಸಾಂನ ಒಡಿಶಾದಲ್ಲಿ ನೆಲೆಸಿದ್ದಾರೆ. ಸುರೇಖಾ ಇತ್ತೀಚೆಗಷ್ಟೆ ಡೆಲ್ ಕಂಪನಿಯಲ್ಲಿ ಉದ್ಯೋಗ ಪಡೆದಿದ್ದರು.
ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ಈ ದಂಪತಿಗಳಿಗೆ ಮಕ್ಕಳಿರಲಿಲ್ಲ. ಈ ಹಿಂದೆ ಮೂರು ವರ್ಷಗಳಿಂದ ಲಕ್ಷ್ಮಿಲೇಔಟ್ನ ಉಮಾ ಸಂಜೀವಿನಿ ರೆಸಿಡೆನ್ಸಿ ಅಪಾರ್ಟ್ಮೆಂಟ್ನಲ್ಲಿ ಆನಂದ್ ಮತ್ತು ಸುರೇಖಾ ದಂಪತಿಗಳು ವಾಸವಾಗಿದ್ದರು. ಜಯನಗರದಲ್ಲಿ ಜಿಮ್ ಸೆಂಟರ್ ಒಂದನ್ನು ಆನಂದ್ ನಡೆಸುತ್ತಿದ್ದರು.
ಮಾರ್ಚ್ ತಿಂಗಳಲ್ಲಿ ಆನಂದ್ ಪತ್ನಿ ಸಮೇತ ಒಡಿಶಾಗೆ ಹೋಗಿ ನೆಲಸಿದ್ದರು. ಬಳಿಕ ಅವರು ಬೆಂಗಳೂರಿಗೆ ಹಿಂತಿರುಗಿ ನವೆಂಬರ್ ತಿಂಗಳಿಂದ ರಮಣಬಾಹು ಅಪಾರ್ಟ್ಮೆಂಟ್ನಲ್ಲಿ ಪತ್ನಿಯನ್ನು ಬಿಟ್ಟುಹೋಗಿದ್ದರು ಎಂದು ಪೊಲೀರು ತಿಳಿಸಿದ್ದಾರೆ.
ಪರಿಚಿತ ವ್ಯಕ್ತಿಯೇ ಹಂತಕ!: ಉಮಾ ಸಂಜೀವಿನಿ ರೆಸಿಡೆನ್ಸಿ ಅಪಾರ್ಟ್ಮೆಂಟ್ಗೆ ಬೆಳಿಗ್ಗೆ 10 ಗಂಟೆಗೆ ಅಪರಿಚಿತ ವ್ಯಕ್ತಿಯೊಬ್ಬ ಆನಂದ್ ನಿವಾಸದ ಬಗ್ಗೆ ವಿಚಾರಿಸಿದ್ದ. ಸೆಕ್ಯುರಿಟಿ ಗಾರ್ಡ್ ರಮಣಬಾಹು ಅಪಾರ್ಟ್ಮೆಂಟ್ನಲ್ಲಿ ಆನಂದ್ ಪತ್ನಿ ವಾಸವಾಗಿರುವುದಾಗಿ ಹೇಳಿದ್ದ. ಆ ವ್ಯಕ್ತಿಯೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಳಗ್ಗೆ 11ಗಂಟೆ ಸುಮಾರಿನಲ್ಲಿ ಆನಂದ್ ತಮ್ಮ ಪತ್ನಿ ಸುರೇಖಾ ಮೊಬೈಲ್ಗೆ ಫೋನು ಮಾಡಿದ್ದಾರೆ. ಆಕೆ ಕರೆ ಸ್ವೀಕರಿಸದ ಕಾರಣ ಅನುಮಾನಗೊಂಡ ಅವರು ಅಪಾರ್ಟ್ಮೆಂಟ್ ಮಾಲೀಕರಿಗೆ ಕರೆ ಮಾಡಿ ತಿಳಿಸಿದ್ದಾರೆ. ಮಾಲೀಕರು ಫ್ಲಾಟ್ ಬಳಿ ಹೋದಾಗ ಬಾಗಿಲಿಗೆ ಚಿಲಕ ಹಾಕಿತ್ತು. ಅವರು ಪೊಲೀಸರಿಗೆ ವಿಷಯ ತಿಳಿಸಿದ ಬಳಿಕ ಈ ಕೊಲೆ ಪ್ರಕರಣ ಬಯಲಾಗಿದೆ.