ಚುನಾವಣಾ ಕಣಕ್ಕೆ ಅರ್ಜುನ್ ಸರ್ಜಾ ತಾಯಿ
ಲಕ್ಷ್ಮಿದೇವಮ್ಮ ಅವರು 1987ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು. ನಟ ಶಕ್ತಿ ಪ್ರಸಾದ್ ಅವರನ್ನು 1958ರಲ್ಲಿ ವಿವಾಹವಾಗಿದ್ದ ಲಕ್ಷ್ಮಿದೇವಮ್ಮ ಜಕ್ಕೇನಹಳ್ಳಿಯಲ್ಲಿ ನೆಲೆಸಿದ್ದರು. ಅಂದಿನಿಂದಲೂ ಅವರು ತಮ್ಮನ್ನು ತಾವು ಅನೇಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.
ಪತಿ ಶಕ್ತಿ ಪ್ರಸಾದ್ ನಿಧನದ ಬಳಿಕ ಅವರು ಬೆಂಗಳೂರಿಗೆ ಸ್ಥಳಾಂತರವಾಗಿದ್ದರು. ದೊಡ್ಡೇರಿಯಿಂದ ಕಣಕ್ಕಿಳಿಯಲು ಪುನಃ ಅವರು ಮನಸ್ಸು ಮಾಡಿದ್ದಾರೆ. ಮಧುಗಿರಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದೆ. ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಜಯಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಡಿಸೆಂಬರ್ 29ರಂದು ಚುನಾವಣೆ ನಡೆಯಲಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡರ ಸಹಾಯವನ್ನು ಲಕ್ಷ್ಮಿದೇವಮ್ಮ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಮಗ ಚಿರಂಜೀವಿ ಸರ್ಜಾ ಸದ್ಯಕ್ಕೆ ಮುಂಬೈಯಲ್ಲಿರುವ ಕಾರಣ ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ. ಸಮಾಜ ಸೇವೆ ಮಾಡುವ ಸಲುವಾಗಿ ತಾವು ರಾಜಕೀಯಕ್ಕೆ ಮರಳಿದ್ದಾಗಿ ಲಕ್ಷ್ಮಿದೇವಮ್ಮ ತಿಳಿಸಿದ್ದಾರೆ.