ಹಿಂದೂ ಉಗ್ರವಾದ ಹೇಳಿಕೆ ಸಮರ್ಥಿಸಿಕೊಂಡ ರಾಹುಲ್
"ಎಲ್ಲ ರೂಪದ ಭಯೋತ್ಪಾದನೆ ಮತ್ತು ಕೋಮುವಾದಿತ್ವದಿಂದ ಭಾರತಕ್ಕೆ ಅಪಾಯವಿದೆ. ಇವನ್ನು ಯಾರೇ ಮಾಡಿರಲಿ, ಎಲ್ಲ ಬಗೆಯ ಭಯೋತ್ಪಾದನೆಯನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ಜಾಗೃತವಾಗಿರಬೇಕು ಎಂಬುದು ರಾಹುಲ್ ಹೇಳಿಕೆಯ ತಾತ್ಪರ್ಯ" ಎಂದು ಕಾಂಗ್ರೆಸ್ ಹೇಳಿಕೆ ನೀಡಿದೆ. [ಓದಿ : ಭಯೋತ್ಪಾದನೆ : ಮುಸ್ಲಿಮರಿಗಿಂತ ಹಿಂದುಗಳೇ ಹೆಚ್ಚು ಡೆಡ್ಲಿ]
2009ರಲ್ಲಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ಹಿಲರಿ ಕ್ಲಿಂಟನ್ ಅವರ ಗೌರವಾರ್ಥ ನೀಡಿದ್ದ ಔತಣಕೂಟದಲ್ಲಿ ಭಾರತದಲ್ಲಿನ ಅಮೆರಿಕಾದ ರಾಯಭಾರಿ ಟಿಮೋತಿ ರೋಮರ್ ಅವರ ಜೊತೆ ಮಾತನಾಡುವಾಗ, ಲಷ್ಕರ್-ಇ-ತೊಯ್ಬಾಗೆ ಕೆಲ ಭಾರತೀಯ ಮುಸ್ಲಿಂ ಸಂಘಟನೆಗಳ ಬೆಂಬಲವಿರುವುದಕ್ಕೆ ಪೂರಕ ಸಾಕ್ಷ್ಯವಿದ್ದರೂ, ಹಿಂದೂ ಸಂಘಟನೆಗಳಿಂದ ಭಾರತಕ್ಕೆ ಹೆಚ್ಚಿನ ಅಪಾಯವಿದೆ. ಈ ಕೋಮುವಾದಿ ಸಂಘಟನೆಗಳು ಮುಸ್ಲಿಂ ಸಂಘಟನೆಗಳೊಂದಿಗೆ ಅನಗತ್ಯವಾಗಿ ಧಾರ್ಮಿಕ ಮತ್ತು ರಾಜಕೀಯ ಸಂಘರ್ಷಕ್ಕಿಳಿಯುತ್ತಿದ್ದಾರೆ ಎಂದು ರಾಹುಲ್ ಹೇಳಿಕೆ ನೀಡಿದ್ದರು.
ಬಿಜೆಪಿ ಕಿಡಿಕಿಡಿ : ರಾಹುಲ್ ಹೇಳಿಕೆಗೆ ಬಿಜೆಪಿಯಿಂದ ಭಾರೀ ವಿರೋಧ ವ್ಯಕ್ತವಾಗಿದೆ. "ರಾಹುಲ್ ಗೆ ಭಾರತದ ಬಗ್ಗೆ ತಿಳಿವಳಿಕೆ ತೀರ ಕಮ್ಮಿ. ಹಿಂದೂ ಉಗ್ರವಾದಿತ್ವ ಅಪಾಯಕಾರಿ ಎಂಬ ಹೇಳಿಕೆ ನೀಡಿ ಭಾರತದ ವಿರುದ್ಧ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆಗೆ ಮತ್ತಷ್ಟು ಉತ್ತೇಜನ ಕೊಟ್ಟಂತಾಗುತ್ತದೆ. ರಾಹುಲ್ ಗಾಂಧಿಯ ಈ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇವೆ. ಪ್ರಧಾನಿ ಇದರ ಬಗ್ಗೆ ಸ್ಪಷ್ಟನೆ ನೀಡಲೇಬೇಕು. ಭಯೋತ್ಪಾದನೆ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಈ ಹೇಳಿಕೆ ಭಾರೀ ಧಕ್ಕೆ ತಂದಿದೆ" ಎಂದು ಬಿಜೆಪಿಯ ರವಿ ಶಂಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ರಾಹುಲ್ ಗಾಂಧಿ ಕೋಮುವಾದವನ್ನು ಬಳಸಿಕೊಂಡು ಭಾರತವನ್ನು ಒಡೆಯಲು ನೋಡುತ್ತಿದ್ದಾರೆ. ಹಿಂದೂಗಳ ವಿರುದ್ಧ ಮಾತನಾಡಿ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತಗಳನ್ನು ಗಳಿಸಬಹುದೆಂದು ಅವರು ತಿಳಿದಿದ್ದಾರೆ. ಇದು ನಿಜಕ್ಕೂ ದುರದೃಷ್ಟಕರ" ಎಂದು ಬಿಜೆಪಿ ವಕ್ತಾರ ತರುಣ್ ವಿಜಯ್ ಹೇಳಿದ್ದಾರೆ.
ಬಿಜೆಪಿಗೆ ಕಾಂಗ್ರೆಸ್ ಪ್ರತಿಕ್ರಿಯೆ : ಬಿಜೆಪಿ ಪ್ರತಿಭಟನೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ, ಬಿಜೆಪಿ ಪ್ರತಿಯೊಂದಕ್ಕೂ ಕೋಮುವಾದ ಮತ್ತು ರಾಜಕೀಯ ಬಣ್ಣ ಬಳಿಯಲು ನೋಡುತ್ತದೆ. ಭಯೋತ್ಪಾದಕರನ್ನು ಕಂದಹಾರಕ್ಕೆ ಕರೆದೊಯ್ಯಲು ಸಹಕರಿಸಿದ ಪಕ್ಷ ಈಗ ಕಾಂಗ್ರೆಸ್ ನತ್ತ ಬೊಟ್ಟು ಮಾಡಿ ತೋರಿಸುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದ್ದಾರೆ. ವಿಕಿಲೀಕ್ಸ್ ಬಿಡುಗಡೆ ಮಾಡಿರುವ ಮಾಹಿತಿಯ ಹಿಂದೆ ಕುತಂತ್ರವಿದ್ದಂತಿದೆ. ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದೂ ಕಾಂಗ್ರೆಸ್ ಹೇಳಿಕೆ ನೀಡಿದೆ.