ಪ್ರಣಾಳಿಕೆ : ರಸ್ತೆಗಳ ಕಾಂಕ್ರಿಟೀಕರಣಕ್ಕೆ ಕೈ ಆದ್ಯತೆ
ಜಿಪಂ,ತಾಪಂ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ನಾನು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವೆ ಎಂಬ ವದಂತಿಗಳ ಬಗ್ಗೆ ಕಿವಿಗೊಡಬೇಡಿ ಅವರು ಸ್ಪಷ್ಟಪಡಿಸಿದರು. ಪ್ರಚಲಿತ ರಾಜಕೀಯ ವಿದ್ಯಮಾನಗಳಿಂದ ವಿಧಾನಮಂಡಲದ ಅಧಿವೇಶನಕ್ಕೆ ಅವಕಾಶವೇ ದೊರೆಯಲಿಲ್ಲ. ಭೂ ಹಗರಣದ ಆರೋಪದಲ್ಲಿ ಆಡಳಿತ ಪಕ್ಷಗಳು ತೊಡಗಿರುವಾಗಲೇ ಜಿಲ್ಲಾ ಪಂಚಾಯತಿ ಚುನಾವಣೆ ಎದುರಾಗಿದೆ. ಇದರಿಂದ ಚಳಗಾಲದ ಅಧಿವೇಶನವೇ ನಡೆಯದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪ್ರಣಾಳಿಕೆ ಮುಖ್ಯಾಂಶಗಳು : ಪ್ರತಿ ಜಿಲ್ಲಾ ಪಂಚಾಯಿತಿ ರಾಜ್ ವ್ಯವಸ್ಥೆಯ ಮೂಲಕ ಸ್ತ್ರೀ ಶಕ್ತಿ ಬ್ಯಾಂಕ್ ಸ್ಥಾಪನೆ, ಪ್ರತಿ ಗ್ರಾಮ ಪಂಚಾಯಿತಿಗೊಂದು ಟ್ರಾಕ್ಟರ್, ಟೆಲ್ಲರ್ ವಿತರಣೆ, ಹೋಬಳಿ ಮಟ್ಟದಲ್ಲಿ ವೃದ್ಧರ ರಕ್ಷಣಾ ಕೇಂದ್ರ ಸ್ಥಾಪನೆ, 15 ಲಕ್ಷ ಮನೆಗಳ ನಿರ್ಮಾಣ, ಗ್ರಾಮ ರಕ್ಷಣಾ ದಳ ಸ್ಥಾಪನೆ, ಪಾರದರ್ಶಕ ಪಂಚಾಯಿತಿ ಆಡಳಿತ, ಗ್ರಾಮೀಣ ರಸ್ತೆಗಳ ಕಾಂಕ್ರಿಟೀಕರಣ ಗ್ರಾಮೀಣ ಪ್ರದೇಶದಲ್ಲಿ ಸ್ಮಶಾನಗಳಿಗೆ ಜಮೀನು ಒದಗಿಸಲು ರಾಜ್ಯ ಸರಕಾರಕ್ಕೆ ಒತ್ತಾಯ ಮಾಡುವುದೂ ಸೇರಿ ಅನೇಕ ಆಕರ್ಷಕ ಯೋಜನೆಗಳನ್ನು ಪ್ರಣಾಳಿಕೆ ಹೊಂದಿದೆ.
ಪ್ರಣಾಳಿಕೆ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ, ಗ್ರಾಮೀಣ ಬದುಕನ್ನು ಹಸನಾಗಿಸುವಲ್ಲಿ ಜನ ಹಿತವಾದ ಪ್ರಣಾಳಿಕೆಯನ್ನು ಕಾಂಗ್ರೆಸ್ ಪ್ರಕಟಿಸಿದೆ. ಅಧಿಕಾರಕ್ಕೆ ಬಂದರೆ ಅನುಷ್ಠಾನಗೊಳಿಸಲು ಬದ್ಧವಾಗಿದೆ ಎಂದು ಭರವಸೆ ನೀಡಿದರು. ಗ್ರಾಮೀಣ ಪ್ರದೇಶದಲ್ಲಿ ಶೇ.100ರಷ್ಟು ಸಾಕ್ಷರತೆ ದುಡಿಯುವ ಕೈಗಳಿಗೆ ಉದ್ಯೋಗ, ಗ್ರಾಮಗಳ ಸಂಪೂರ್ಣ ನೈರ್ಮಲ್ಯ, ಚೈತನ್ಯಶೀಲ ಕೃಷಿ ವ್ಯವಸ್ಥೆ, ಸರ್ವರಿಗೂ ವಸತಿ, ಶುದ್ಧ ಕುಡಿಯುವ ನೀರು ಮತ್ತು ಆರೋಗ್ಯ ಸೌಲಭ್ಯಗಳನ್ನು ಹಳ್ಳಿಗಳ ಮಟ್ಟದಲ್ಲೇ ಒದಗಿಸಲು ಕಾಂಗ್ರೆಸ್ ಕಟಿ ಬದ್ಧವಾಗಿದೆ ಎಂದು ಪರಮೇಶ್ವರ ಹೇಳಿದರು.
ಬಂಗಾರಪ್ಪ ಪಕ್ಷ ಬಿಟ್ಟಿದ್ದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯನವರು, ಬಂಗಾರಪ್ಪ ಪಕ್ಷ ಬಿಟ್ಟಿದ್ದರಿಂದ ಪಕ್ಷಕ್ಕೆ ಏನೂ ನಷ್ಟ ಆಗದು. ಅವರೀಗ ಜೆಡಿಎಸ್ ಸೇರಿದ್ದಾರೆ. ಆ ಪಕ್ಷಕ್ಕೆ ಎಷ್ಟು ಲಾಭವಾಗುತ್ತದೋ ಗೊತ್ತಿಲ್ಲ. ಆದರೆ, ಕಾಂಗ್ರೆಸ್ ಪಕ್ಷಕ್ಕಂತೂ ಹಾನಿ ಆಗುವುದಿಲ್ಲ ಎಂದರು.