ಬೋಪಯ್ಯ ಎಸ್ಕಾರ್ಟ್ ಜೀಪು ಅಪಘಾತ: ಎಸ್ಐ ಸಾವು
ಘಟನೆಯ ವಿವರ: ಬುಧವಾರ ಸಂಜೆ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಪತ್ನಿ ಕುಂತಿಬೋಪಯ್ಯ ಹಾಗೂ ಶಾಸಕ ಅಪ್ಪಚ್ಚುರಂಜನ್, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎನ್.ರಾಜಾರಾವ್ ಅವರುಗಳು ಕಾರಿನಲ್ಲಿ ಮಡಿಕೇರಿಯಿಂದ ಬೆಂಗಳೂರಿನತ್ತ ತೆರಳುತ್ತಿದ್ದರು. ಇವರ ಕಾರಿನ ಮುಂದೆ ಎಸ್ಕಾರ್ಟ್ ಕಾರು ತೆರಳುತ್ತಿತ್ತು.
ಸಂಜೆ 6.45ರ ವೇಳೆಗೆ ಕುಶಾಲನಗರಕ್ಕೆ ಸಮೀಪವಿರುವ ಬಸವನಹಳ್ಳಿ ಬಳಿ ಎದುರಿನಿಂದ ಬಂದ ಬೈಕಿಗೆ ತೆರಳಲು ಅವಕಾಶ ಮಾಡಿಕೊಡಲು ಚಾಲಕ ಯೋಗೇಶ್ ಮುಂದಾದಾಗ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ನಿಂತಿದ್ದ ಟಿಂಬರ್ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಎಸ್ಐ ಮೊಣ್ಣಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರಿಗೆ ಕುಶಾಲನಗರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಡಿಕೇರಿಗೆ ಕರೆದೊಯ್ಯಲಾಯಿತಾದರೂ ಅವರು ಮಡಿಕೇರಿಗೆ ತಲುಪುವ ವೇಳೆಗೆ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ.
ಇನ್ನು ಕಾರಿನಲ್ಲಿದ್ದ ಚಾಲಕ ಯೋಗೇಶ್, ಪೇದೆಗಳಾದ ವಸಂತ, ಸೋಮಣ್ಣ ಅವರಿಗೂ ಗಂಭೀರ ಗಾಯಗಳಾಗಿದ್ದು, ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಮಂಜುನಾಥ್ ಅಣ್ಣಿಗೇರಿ, ಡಿವೈಎಸ್ಪಿ ಜಯಪ್ರಕಾಶ್ ಅಕ್ಕರಕಿ, ಎಸ್ಐ ಚನ್ನೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.