ಸೇಡಿಗೆ ಮತ್ತೆ ತಹತಹಿಸುತ್ತಿರುವ ಯಡಿಯೂರಪ್ಪ
ಜೆಡಿಎಸ್ ಮತ್ತು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದ ಎಲ್ಲ ಹಗರಣ ಬಗ್ಗೆ ಸಾಕ್ಷ್ಯ ಸಂಗ್ರಹಿಸಿದ್ದು ಸೂಕ್ತ ಸಮಯದಲ್ಲಿ ಎಲ್ಲ ದಾಖಲೆಗಳನ್ನು ಬಹಿರಂಗಪಡಿಸಿ, ಎರಡೂ ಪಕ್ಷಗಳ ಕೊಳಕನ್ನು ಬಯಲಿಗೆಳೆಯುವುದಾಗಿ ಹೇಳಿದ್ದಾರೆ. ಜಿಲ್ಲಾ ಮತ್ತು ತಾಲೂಕಾ ಪಂಚಾಯತಿ ಚುನಾವಣೆಯ ಮೊದಲು ಅಥವಾ ನಂತರ ಬಹಿರಂಗಪಡಿಸುವ ಕುರಿತು ಚಿಂತಿಸುತ್ತಿರುವುದಾಗಿ ತಿಳಿಸಿದ್ದಾರೆ.
ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮುಖಾಂತರ ಎಲ್ಲ ಹಗರಣಗಳನ್ನು ಬಯಲಿಗೆಳೆಯುವುದಾಗಿ ಹೇಳಿದ್ದ ಯಡಿಯೂರಪ್ಪನವರನ್ನು ದೆಹಲಿಗೆ ಕರೆಸಿಕೊಂಡು ಬಿಜೆಪಿ ಹೈಕಮಾಂಡ್ ತಿಳಿಹೇಳಿತ್ತು. ಈ ತಿಂಗಳು ಡಿಸೆಂಬರ್ 26 ಮತ್ತು 31ರಂದು ನಡೆಯುತ್ತಿರುವ ಜಿಲ್ಲಾ ಪಂಚಾಯತಿ ಮತ್ತು ತಾಲೂಕಾ ಪಂಚಾಯತಿ ಚುನಾವಣೆಯ ಬಗ್ಗೆ ಗಮನಹರಿಸುವಂತೆ ಹೈಕಮಾಂಡ್ ಬುದ್ಧಿ ಹೇಳಿತ್ತು.
ಭೂಹಗರಣ, ಡಿನೋಟಿಫಿಕೇಷನ್ ಮತ್ತು ಅಕ್ರಮ ಗಣಿಗಾರಿಕೆಯಲ್ಲಿ ಅವರದು ಎತ್ತಿದ ಕೈ. ಆದರೆ, ನಾನೇ ವಿಲನ್ ಎಂದು ಬಿಂಬಿಸುತ್ತ ಜನರಲ್ಲಿ ನನ್ನ ಬಗ್ಗೆ ತಪ್ಪು ಕಲ್ಪನೆ ಬರುವಂತೆ ವಿಷಬೀಜ ಬಿತ್ತುತ್ತಿದ್ದಾರೆ. ಅವರು ಯಶಸ್ವಿಯಾಗಲೂ ಎಂದೂ ಬಿಡುವುದಿಲ್ಲ ಎಂದು ಯಡಿಯೂರಪ್ಪ ಹೂಂಕರಿಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮಾಡಿರುವ ಸುಳ್ಳು ಆರೋಪಗಳು ಚುನಾವಣೆಯ ಫಲಿತಾಂಶದ ಮೇಲೆ ಎಳ್ಳಷ್ಟೂ ಪರಿಣಾಮ ಬೀರುವುದಿಲ್ಲ. ಅವರು ಆಧಾರರಹಿತ ಆರೋಪಗಳನ್ನು ಮಾಡುತ್ತ ಹೋಗಲಿ, ನಾನು ದೃಢನಿರ್ಧಾರದಿಂದ ಹೋರಾಡುತ್ತಾ ಹೋಗುತ್ತೇನೆ ಎಂದು ಎದೆತಟ್ಟಿರುವ ಯಡಿಯೂರಪ್ಪ, ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಕ್ಕಳು ಮರಿಗಳು, ಸಂಬಂಧಿಗಳಿಗೆ ನಿವೇಶನಗಳನ್ನು ಹಂಚಿ ಸಿಕ್ಕಿಬಿದ್ದಿದ್ದ ಯಡಿಯೂರಪ್ಪ ಪಂಚಾಯತ್ ಚುನಾವಣೆ ಮತ್ತು ಪರ್ಯಾಯ ನಾಯಕತ್ವದ ಕೊರತೆಯ ಕಾರಣದಿಂದಾಗಿ ಹಾಗೂ ಹೀಗೂ ಜೀವದಾನ ಪಡೆದು ಬಂದಿದ್ದಾರೆ. ಈಗ ಮತ್ತೆ ವಿರೋಧ ಪಕ್ಷಗಳನ್ನು ಕೆಣಕುತ್ತಿರುವುದು ಬಿಜೆಪಿ ಹೈಕಮಾಂಡ್ ಕಣ್ಣು ಕೆಂಪಾಗಿಸಿದರೂ ಆಶ್ಚರ್ಯವಿಲ್ಲ.