ಇವರಿಬ್ಬರೂ ರಾಜಕೀಯದಿಂದ ನಿವೃತ್ತಿ ಆಗೋಲ್ಲ
ಜಾತ್ಯತೀತ ಜನತಾದಳ ಕಚೇರಿಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ವಯಸ್ಸಿಗೂ ರಾಜಕಾರಣಕ್ಕೂ ಸಂಬಂಧವಿಲ್ಲ. ನಾನಾಗಲೀ, ದೇವೇಗೌಡರಾಗಲೀ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಬಂಗಾರಪ್ಪ ಸಾರಿ ಹೇಳಿದರು
ದೇವೇಗೌಡರು ಮತ್ತು ನಾನು ಸಮಕಾಲೀನ ರಾಜಕಾರಣಿಗಳು. ತತ್ವ ಸಿದ್ಧಾಂತಗಳು ಒಂದೇ. ಆದರೆ, ಈವರೆಗೂ ಬೇರೆ ಬೇರೆ ಪಕ್ಷಗಳಲ್ಲಿ ಕೆಲಸ ಮಾಡಿದ್ದೇವೆ. ಜಾತ್ಯತೀತ ನಿಲುವು ಹೊಂದಿರುವ ನಾವುಗಳು ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಸರಕಾರದ ಅನಾಚಾರಗಳ ವಿರುದ್ಧ ಹೋರಾಟ ನಡೆಸಬೇಕಿದೆ. ಹಿಂದುಳಿದ ವರ್ಗಗಳ ನಾಯಕನಾಗಿರುವ ನನ್ನನ್ನು ಕಾಂಗ್ರೆಸ್ ಪಕ್ಷ ಬಳಸಿಕೊಂಡು ಮೂಲೆಗುಂಪು ಮಾಡಿದೆ ಎಂದು ಸಿಟ್ಟಾದರು.
ರಾಜ್ಯ ಬಿಜೆಪಿ ಸರಕಾರ ಭ್ರಷ್ಟಾಚಾರದ ಕೂಪವಾಗಿದೆ. ಮುಖ್ಯಮಂತ್ರಿಯೇ ಸರಕಾರಿ ಭೂಮಿಯನ್ನು ಡಿನೋಟಿಫೈ ಮಾಡಿರುವುದು ಖಂಡನೀಯ. ಇದರ ವಿರುದ್ಧ ಹೋರಾಟ ನಡೆಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಜಯ ದೊರೆಯುವುದು ನಿಶ್ಚಿತ. ರಾಜ್ಯದಲ್ಲಿ ನಿಜವಾದ ಪ್ರತಿಪಕ್ಷವೆಂದರೆ ಅದು ಜೆಡಿಎಸ್ ಎಂದು ಬಂಗಾರಪ್ಪ ಹೇಳಿದರು.