ಅನೈತಿಕ ಸಂಬಂಧಕ್ಕೆ ಪತ್ನಿಯನ್ನು ಕೊಲೆಗೈದೆ
ನಾನು ಕೊಲ್ಕತ್ತಾದಲ್ಲಿದ್ದಾಗ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಆರಂಭವಾಯಿತು. ಆಕೆಯೊಂದಿಗೆ ನಾನು ಲಿವ್ ಇನ್ ಸಂಬಂಧವನ್ನೂ ಹೊಂದಿದ್ದೆ. ಇದು ನನ್ನ ಪತ್ನಿ ಅನುಪಮಾಗೆ ಗೊತ್ತಾಯಿತು. ಇದರಿಂದ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ನಿತ್ಯ ಜಗಳ ಕಾಯುತ್ತಿದ್ದ ಆಕೆಯೊಂದಿಗೆ ನನಗೆ ಸಂಸಾರ ಸಾಕೆನಿಸಿತ್ತು. ಹೀಗಾಗಿ ಅವಳನ್ನು ಹತ್ಯೆ ಮಾಡುವ ತೀರ್ಮಾನ ತೆಗೆದುಕೊಂಡೆ ಎಂದು ಟೆಕ್ಕಿ ಪೊಲೀಸರೆದುರು ಬಾಯಿಬಿಟ್ಟಿದ್ದಾನೆ.
ಆರೋಪಿ 37 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ರಾಜೇಶ್ ಗುಲಾಟಿ ಪತ್ನಿ 33 ವರ್ಷದ ಅನುಪಮ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಎರಡು ತಿಂಗಳನಿಂದ ಫ್ರಿಜ್ ನಲ್ಲಿಟ್ಟಿದ್ದ. ಸಂಶಯ ವ್ಯಕ್ತಪಡಿಸಿದ್ದ ಅನುಪಮ ಅವರ ಸಹೋದರ ಪೊಲೀಸ್ ಠಾಣೆಯಲ್ಲಿ ಅನುಪಮ ಕಾಣೆಯಾಗಿದ್ದಾರೆ ಎಂಬ ದೂರನ್ನು ದಾಖಲಿಸಿದ್ದರು. ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರಿಗೆ ಗಂಡನೇ ಹೆಂಡತಿಯನ್ನು ಕೊಂದಿರುವುದು ಬೆಳಕಿಗೆ ಬಂದಿತ್ತು.
ಹೆಂಡತಿಯನ್ನು ಬರ್ಬರವಾಗಿ ಹತ್ಯೆಗೈದಿದ್ದ ರಾಜೇಶ್, ಈ ಸಂಗತಿಯನ್ನು ತನ್ನ ಮಕ್ಕಳಿಂದಲೂ ಮುಚ್ಚಿಟ್ಟು, ಆಕೆ ಸಂಬಂಧಿಕರನ್ನು ನೋಡಲು ದೆಹಲಿಗೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿದ್ದ. ಹೆಂಡತಿ ಅನುಪಮಾ ಬಗ್ಗೆ ಆಕೆಯ ಸಂಬಂಧಿಗಳಿಗೂ ಸುಳ್ಳು ಹೇಳಿದ್ದ.
ಮರೆಯದೆ ಓದಿ : ಆಗದಿದ್ದರೆ ಬಿಟ್ಟುಬಿಡಿ ಅತ್ಲಾಗೆ, ಕೊಲ್ಲೋದು ಯಾಕೆ?
ಇಂತಹದೆ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಇನ್ಫೋಸಿಸ್ ಉದ್ಯೋಗಿಯಾಗಿದ್ದ ಸತೀಶ್ ಕುಮಾರ್ ಗುಪ್ತಾ ತನ್ನ ಹೆಂಡತಿ ಪ್ರಿಯಾಂಕಾಳನ್ನು ಕುರ್ಚಿಗೆ ಕಟ್ಟಿ, ಕತ್ತು ಕೊಯ್ದು ಹತ್ಯೆಗೈದು, ನಂತರ ಏನೂ ಗೊತ್ತೇ ಇಲ್ಲವೆಂಬಂತೆ ಜಾಗಿಂಗ್ ಹೋಗಿದ್ದ. ನಂತರ ಪೊಲೀಸರೆದಿರು ಕೂಡ ನಾಟಕವಾಡಿದ್ದ ಸತೀಶ್, ಪತ್ನಿಯನ್ನು ಕೊಲೆಗೈದಿದ್ದನ್ನು ಒಪ್ಪಿಕೊಂಡಿದ್ದ.