ಜಯಮಾಲಾ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ
ಈ ಪ್ರಕರಣದಲ್ಲಿ 51 ವರ್ಷದ ಜಯಮಾಲಾ ಅವರನ್ನು ಮೂರನೇ ಆರೋಪಿಯನ್ನಾಗಿ ಮಾಡಲಾಗಿದೆ. 1987ರಲ್ಲಿ ತಾವು ದೇಗುಲದ ಗರ್ಭಗುಡಿ ಪ್ರವೇಶಿಸಿ ಅಯ್ಯಪ್ಪ ಸ್ವಾಮಿಯ ಪಾದ ಸ್ಪರ್ಶ ಮಾಡಿದ್ದಾಗಿ ಜಯಮಾಲಾ ಅವರು 2006ರಲ್ಲಿ ಅಷ್ಟಮಂಗಲ ಪ್ರಶ್ನೋತ್ತರ ವೇಳೆಯಲ್ಲಿ ತಪ್ಪೊಪ್ಪಿಕೊಂಡಿದ್ದರು.
ದೇವಾಲಯದೊಳಗೆ 10ರಿಂದ 50 ವರ್ಷದೊಳಗಿನ ಮಹಿಳೆಯರು ಪ್ರವೇಶಿಸುವಂತಿಲ್ಲ. ನಿಯಮಗಳನ್ನು ಗಾಳಿತೂರಿದ್ದಕ್ಕಾಗಿ ಜಯಮಾಲಾ ಮತ್ತಿತರ ಮೂವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ದೇವಸ್ಥಾನದ ಜ್ಯೋತಿಷಿ ಉನ್ನಿಕೃಷ್ಣನ್ ಪಣಿಕ್ಕರ್, ಅವರ ಸಹಾಯಕ ರಘುಪತಿ ಮತ್ತು ದೇವಸ್ಥಾನದ ಕಾರ್ಯಕಾರಿ ಅಧಿಕಾರಿ ರಾಜಶೇಖರ್ ಇನ್ನಿತರ ಆರೋಪಿಗಳು.
ಋತುಮತಿಯಾದ ಮಹಿಳೆ ದೇವಸ್ಥಾನ ಪ್ರವೇಶಿಸಲು ಅವಕಾಶವಿಲ್ಲದಿದ್ದರೂ ತಾವು ದೇವಳ ಪ್ರವೇಶಿಸಿ ಅಯ್ಯಪ್ಪನ ಪಾದಸ್ಪರ್ಶ ಮಾಡಿದ್ದಾಗಿ ಹೇಳಿದ್ದು ದೇಶದಾದ್ಯಂತ ಭಾರೀ ವಿವಾದಕ್ಕೆ ಈಡುಮಾಡಿತ್ತು. ಕೇರಳದ ಶಬರಿಮಲೆಗೆ ದೇಶದ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ. ಶಬರಿಮಲೆ ಬೆಟ್ಟದಲ್ಲಿ ಸಂಕ್ರಾಂತಿಯಂದು ಮಕರಜ್ಯೋತಿ ದರ್ಶನವಾಗಲು ಕೇವಲ ಒಂದು ತಿಂಗಳು ಬಾಕಿಯಿರುವಾಗ ಈ ಪ್ರಕರಣ ಜೀವಪಡೆದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.