ವಿದ್ಯುತ್ ದರ ಏರಿಕೆಗೆ ಶೋಭಾ ಪವರ್ ಬ್ರೇಕ್
ವಿದ್ಯುತ್ ದರ ಏರಿಕೆ ಬಗ್ಗೆ ಸರಕಾರ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ. ವಿದ್ಯುತ್ ದರ ಏರಿಕೆ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸುವುದರಿಂದ ಸದ್ಯಕ್ಕಂತೂ ವಿದ್ಯುತ್ ದರ ಹೆಚ್ಚಳ ಆಗುವುದಿಲ್ಲ. ಅದೇ ರೀತಿ ರಾಜ್ಯದ ಜನರಿಗೆ ಹಾಗೂ ರೈತರಿಗೆ ಅನುಕೂಲವಾಗುವ ನಿರ್ಧಾರವನ್ನೇ ಸರಕಾರ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ವಿದ್ಯುತ್ ಪ್ರತಿ ಯೂನಿಟ್ಗೆ 30 ಪೈಸೆ ಹೆಚ್ಚಿಸಿರುವುದು ಗ್ರಾಹಕರಿಗೆ ಬಹಳಷ್ಟು ತೊಂದರೆಯನ್ನುಂಟು ಮಾಡಿದೆ. ಹೀಗಾಗಿ ಬೆಲೆಯ ಮರುಪರಿಶೀಲನೆ ಮಾಡುವುದು ಅನಿವಾರ್ಯ. ಮಾಸಿಕ 100 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರು ಗ್ರಾಮೀಣ ಜನತೆ. ದರ ಏರಿಕೆಯಂತಹ ಹೊರೆಯನ್ನು ಅವರು ಸಹಿಸುವುದಿಲ್ಲ. ಈ ಅಂಶಗಳನ್ನೆಲ್ಲ ಪರಿಗಣಿಸಿ ವಿದ್ಯುತ್ ದರ ಏರಿಕೆ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಎಂದು ಶೋಭಾ ಹೇಳಿದ್ದಾರೆ
ಗ್ರಾಮೀಣ ಭಾಗಗಳಿಗೆ 17 ಗಂಟೆ ವಿದ್ಯುತ್ ಪೂರೈಸುವುದಲ್ಲದೆ ಮುಂದಿನ ಬೇಸಿಗೆಯಲ್ಲಿಯೂ ಗ್ರಾಮೀಣ ಭಾಗಗಳಿಗೆ 17 ಗಂಟೆಗಳ ಕಾಲ ವಿದ್ಯುತ್ ಪೂರೈಸಲಾಗುವುದು. ಅಲ್ಲದೆ ಕೃಷಿ ಪಂಪ್ ಸೆಟ್ಗಳಿಗೂ ಆರು ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ನೀಡಲಾಗುವುದು. ಸರಕಾರದ ಈ ನಿರ್ಧಾರಕ್ಕೆ ವಿದ್ಯುತ್ ಸರಬರಾಜು ಕಂಪನಿಗಳು ಸಮ್ಮತಿಸಿವೆ ಎನ್ನಲಾಗಿದೆ.