ಯಡ್ಡಿ ಭೂಹಗರಣದ ವಿರುದ್ಧ ಹರಿಹಾಯ್ದ ಸೋನಿಯಾ
ಕಾಂಗ್ರೆಸ್ ನ ಕೆಲ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದು ಗೊತ್ತಾಗುತ್ತಲೇ ತಕ್ಷಣ ಕ್ರಮ ತೆಗೆದುಕೊಂಡಿದ್ದೇವೆ. ಆದರೆ, ಬೆಂಗಳೂರು ಸುತ್ತಮುತ್ತ ತನ್ನ ಸಂಬಂಧಿಕರಿಗೇ ಅಕ್ರಮ ನಿವೇಶನಗಳನ್ನು ನೀಡಿದ ಆರೋಪಕ್ಕೆ ಗುರಿಯಾಗಿರುವ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಬಿಜೆಪಿ ಕ್ರಮ ತೆಗೆದುಕೊಳ್ಳಲು ನಿರಾಕರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೋಫೋರ್ಸ್ ಹಗರಣ ನಡೆದ 25 ವರ್ಷಗಳ ಬಳಿಕ ಮೊದಲ ಬಾರಿಗೆ 2ಜಿ ತರಂಗಗುಚ್ಛ ಹಗರಣದಿಂದಾಗಿ ಚಳಿಗಾಲದ ಅಧಿವೇಶ ಸಂಪೂರ್ಣ ಬಲಿಯಾಗಿದೆ. ಇಲ್ಲಿಯವರೆಗೆ ಕೇಲವ 7 ಗಂಟೆಗಳ ಕಲಾಪ ಮಾತ್ರ ನಡೆದಿದೆ. 2ಜಿ ಹಗರಣದ ವಿಚಾರಣೆಗೆ ಜಂಟಿ ಸಂಸದೀಯ ಸಮಿತಿ ರಚನೆಯಾಗಬೇಕು ಎಂದು ವಿರೋಧ ಪಕ್ಷಗಳು ಪಟ್ಟುಹಿಡಿದಿದ್ದರೆ, ಎನ್ ಡಿ ಎ ಅದರ ಅಗತ್ಯವಿಲ್ಲ ಎಂದು ಉತ್ತರ ನೀಡಿದೆ. ಎನ್ ಡಿ ಎ ಉತ್ತರಕ್ಕೆ ಬಗ್ಗದ ವಿರೋಧ ಪಕ್ಷಗಳು ಜಂಟಿ ಸಂಸದೀಯ ಸಮಿತಿ ರಚಿಸದಿದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಮಾಡುವುದಾಗಿ ಹೇಳಿವೆ.
ಯಡಿಯೂರಪ್ಪ ಪ್ರತಿವಾಗ್ದಾಳಿ : ಸೋನಿಯಾ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಬಿಜೆಪಿಯ ವ್ಯವಹಾರದ ಬಗ್ಗೆ ಹೇಳಿಕೆ ನೀಡುವ ನೈತಿಕ ಹಕ್ಕು ಸೋನಿಯಾ ಗಾಂಧಿ ಅವರಿಗೆ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ಸಿಗೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. 2ಜಿ ಹಗರಣ, ಕಾಮನ್ ವೆಲ್ತ್ ಹಗರಣ ಮತ್ತು ಆದರ್ಶ್ ಅಪಾರ್ಟ್ ಮೆಂಟ್ ಹಗರಣಗಳಲ್ಲಿ ಯಾವ ಪಕ್ಷ ಭಾಗಿಯಾಗಿದೆ ಎಂದು ಇಡೀ ಜಗತ್ತಿಗೇ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಕುಟುಂಬದಿಂದ ನಡೆದಿದೆಯೆನ್ನಲಾದ ಭೂಹಗರಣಗಳ ಬಗ್ಗೆ ಕರ್ನಾಟಕದ ನಾಯಕರು ಸಾಕಷ್ಟು ಕೂಗಾಟ ನಡೆಸಿದ್ದರೂ ಬಿಜೆಪಿ ಹೈಕಮಾಂಡ್ ಯಾವುದೇ ಸೊಪ್ಪು ಹಾಕಿರಲಿಲ್ಲ. ಸೋನಿಯಾ ಗಾಂಧಿಯೇ ಮೊದಲ ಬಾರಿಗೆ ಈ ಹಗರಣದ ಕುರಿತು ಬಹಿರಂಗವಾಗಿ ಪ್ರಸ್ತಾಪಿಸಿರುವುದಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕತ್ವ ಯಾವ ರೀತಿ ಪ್ರತಿಕ್ರಿಯಿಸುತ್ತೆ ಕಾದು ನೋಡೋಣ.