ಜೆಡಿಎಸ್ಸಿಗೆ ಬಂಗಾರಿ ಯಾರೆ ನೀ ಬುಲ್ ಬುಲ್
ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ಹೂಡಲು ತಂತ್ರ ಹೂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಬಂಗಾರಪ್ಪ ಅವರ ಈ ನಿಲುವಿನಿಂದ ಶಿವಮೊಗ್ಗದ ಜಿಪಂ, ತಾಪಂ ಕ್ಷೇತ್ರಗಳಲ್ಲಿ ಕೊಂಚ ಹಿನ್ನಡೆ ಆಗಬಹುದು. ಬಂಗಾರಪ್ಪ ಅಷ್ಟೇ ಅಲ್ಲ, ಇನ್ನಷ್ಟು ನಾಯಕರು ಪಕ್ಷ ತೊರೆಯುವ ಭೀತಿಯನ್ನು ಕಾಂಗ್ರೆಸ್ ಪಾಳೆಯ ಎದುರಿಸುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗೆಸ್ ಪಕ್ಷದ ಟಿಕೆಟ್ ನಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಂಗಾರಪ್ಪ ಪರಾಭವಗೊಂಡಾಗಿನಿಂದ ನಿರುದ್ಯೋಗಿ ಆಗಿದ್ದರು.
"ಭ್ರಷ್ಟ ಬಿಜೆಪಿ ವಿರುದ್ದ ಹೋರಾಡಲು ಕಾಂಗ್ರೆಸ್ ವಿಫಲವಾಗಿದೆ. ಪಕ್ಷದ ಜಾತ್ಯತೀತ ಧೋರಣೆ ಕೂಡಾ ನಶಿಸುತ್ತಿದೆ. ರಾಷ್ಟ್ರೀಯ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಜನತಾದಳ ಸೇರಲು ನಿರ್ಧರಿಸಿದ್ದೇನೆ" ಎಂದು ಪಕ್ಷ ಬದಲಾವಣೆಯನ್ನು ಬಂಗಾರಪ್ಪ ಸಮರ್ಥಿಸಿಕೊಂಡಿದ್ದಾರೆ." ನನಗೆ ಅಧಿಕಾರಕ್ಕೆ ಅಂಟಿಕೊಂಡಿರಬೇಕೆನ್ನುವ ಆಶೆಯಿಲ್ಲ. ಈಗಾಗಲೇ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತು ಸಂಸದನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಾಂಗ್ರೆಸ್ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ. ಸಣ್ಣಸಣ್ಣ ರಾಜ್ಯದಲ್ಲಿ ಕೂಡಾ ಹೊಂದಾಣಿಕೆಯಿಲ್ಲದೆ ಅಧಿಕಾರಕ್ಕೆ ಬರುವಂತಿಲ್ಲ. ನೆಹರೂ, ಇಂದಿರಾ ಮತ್ತು ರಾಜೀವ್ ಇದ್ದಾಗಿನ ಪಕ್ಷದ ವರ್ಚಸ್ಸು ಈಗ ಆ ಪಕ್ಷಕ್ಕೆ ಇಲ್ಲ. ಜನಪರ ಕೆಲಸಕ್ಕಾಗಿ ಜೆಡಿಎಸ್ ಸೇರಲು ನಿರ್ಧರಿಸಿದ್ದೇನೆ. ನನಗೆ ಯಾವುದೇ ಸ್ಥಾನಮಾನ ಬೇಕಾಗಿಲ್ಲ" ಎಂದು ಬಂಗಾರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೇವೇಗೌಡರ ಮಡಿಲಿಗೆ ಚನ್ನಿಗಪ್ಪ : ದೇವೇಗೌಡ ಅವರನ್ನು ವಾಚಾಮಗೋಚರವಾಗಿ ನಿಂದಿಸಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಸಚಿವ ಸಿ.ಚೆನ್ನಿಗಪ್ಪ ಕೊನೆಗೂ ಮತ್ತೆ ಮಾತೃ ಪಕ್ಷ ಸೇರಲು ತೀರ್ಮಾನ ತೆಗೆದುಕೊಂಡಿದ್ದಾರೆ. ಡಿ.15ರಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆಗೆ ಮುಹೂರ್ತ ನಿಗದಿಯಾಗಿದೆ. ಆಪರೇಷನ್ ಕಮಲದಿಂದ ಚೆನ್ನಿಗಪ್ಪ ಪುತ್ರ ಡಿ.ಸಿ.ಗೌರಿಶಂಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿತ್ತು. ಸಿ.ಚೆನ್ನಿಗಪ್ಪ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ವಿರುದ್ಧ ಸೋಲುಂಡಿದ್ದು ನಿಮಗೆ ನೆನಪಿರಬಹುದು.
ಸಿದ್ದರಾಮಯ್ಯ ಪ್ರತಿಕ್ರಿಯೆ : ಬಂಗಾರಪ್ಪ ಪಕ್ಷ ತೊರೆಯುತ್ತಿರುವ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, ಈ ವದಂತಿಯನ್ನು ತಳ್ಳಿಹಾಕಿದ್ದು, ಬಂಗಾರಪ್ಪ ಅವರು ಪಕ್ಷದ ಆಧಾರಸ್ತಂಭವಾಗಿದ್ದಾರೆ, ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.