ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯದು ಕಿತ್ತುಬಾಕ ಸಂಸ್ಕೃತಿ : ಕರವೇ ಆಕ್ರೋಶ

By * ರೋಹಿಣಿ ಬಳ್ಳಾರಿ
|
Google Oneindia Kannada News

Bellary KaRaVe blasts Yeddyurappa
ಬಳ್ಳಾರಿ, ಡಿ. 9 : ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಲ್ಲಿ ತೊಡಗಿರುವ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಬಳ್ಳಾರಿ ಜಿಲ್ಲಾ ಘಟಕ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಪ್ರತಿಭಟನೆಯ ನೇತೃತ್ವವಹಿಸಿದ್ದ ಕರವೇ ಅಧ್ಯಕ್ಷ ಚಾನಾಳ್ ಶೇಖರ್ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ರಾಜ್ಯ ಕಂಡರಿಯದ - ಕೇಳರಿಯದ ಭ್ರಷ್ಟ, ಸ್ವಜನಪಕ್ಷಪಾತ ಸರ್ಕಾರ. ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ರೈತ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿರುವ ಸರ್ಕಾರ ಎಂದು ಆರೋಪಿಸಿದರು.

ಭೂ ಹಗರಣದ ಮೂಲಕ ರಾಜ್ಯದ ಇತಿಹಾಸವನ್ನು ರಾಷ್ಟ್ರಮಟ್ಟದಲ್ಲಿ ಮಣ್ಣಪಾಲು ಮಾಡಿರುವ ಈ ಸರ್ಕಾರ, ಕಾಂಗ್ರೆಸ್ - ಜೆಡಿಎಸ್‌ಗಳಂತೆ ಕೇವಲ ರಾಜಕಾರಣದಲ್ಲಿ ತೊಡಗಿಕೊಂಡು ಅಭಿವೃದ್ಧಿಯನ್ನು ಕಡೆಗಾಣಿಸಿವೆ. ಇದರಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಗುಲ್ಬರ್ಗಾ, ಬೆಳಗಾವಿ ಹಾಗೂ ಇನ್ನಿತರ ಕಡೆ ವಿಶೇಷ ಅಧಿವೇಶನ ನಡೆಸುವ ಮೂಲಕ ಜನರ ಯೋಚನಾ ದಿಕ್ಕನ್ನು ತಪ್ಪಿಸುತ್ತಿದೆ ಎಂದು ಹೇಳಿದರು.

ದಾವಣೆಗೆರೆ, ಉಡುಪಿ, ಕೊಪ್ಪಳ, ಚಾಮರಾಜನಗರ, ಗದಗ, ಬಾಗಲಕೋಟೆ, ಹಾವೇರಿ ಜಿಲ್ಲೆಗಳು ಘೋಷಣೆ ಆಗಿ ಒಂದು ದಶಕ ಕಳೆದಿದ್ದರೂ ಕೂಡ ಈ ಜಿಲ್ಲೆಗಳು ಅಭಿವೃದ್ಧಿ ಸಾಧಿಸಿಲ್ಲ. ರಾಮನಗರ, ಚಿಕ್ಕಬಳ್ಳಾಪುರ ಮತ್ತು ಯಾದಗಿರಿ ಅಭಿವೃದ್ಧಿ ಕಾಣುತ್ತಿಲ್ಲ. ನಾಡಿನ ಜ್ವಲಂತ ಸಮಸ್ಯೆಗಳಾದ ಹೊಗೇನಕಲ್, ಕಳಸಾ ಬಂಡೂರಿ, ಕೃಷ್ಣ ನ್ಯಾಯಾಧಿಕರಣ ಪ್ರಾಧಿಕಾರ ರಚನೆ, ಡಾ|| ಸರೋಜಿನಿ ಮಹಿಷಿ ವರದಿ ಕುರಿತು ಈ ಸರ್ಕಾರ ಚಿಂತನೆಯನ್ನೇ ನಡೆಸುತ್ತಿಲ್ಲ ಎಂದರು.

ಕೆಐಎಡಿಬಿ ಮೂಲಕ ಕೃಷಿಯೋಗ್ಯ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿರುವ ಈ ಸರ್ಕಾರ ರಿಯಲ್‌ ಎಸ್ಟೇಟ್ ದಂಧೆಯನ್ನು ನಿರ್ವಹಿಸುತ್ತಿದೆ. ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಹೆಸರಲ್ಲಿ ನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಹಾಳು ಮಾಡಿ ಕೃಷಿಕರ ಬದುಕಿನ ಹಕ್ಕನ್ನೇ ಕಿತ್ತುಕೊಳ್ಳುತ್ತಿದೆ. ಈ ಸರ್ಕಾರ ಕಿತ್ತುಬಾಕ ಸಂಸ್ಕೃತಿ'ಗೆ ಸಂಪೂರ್ಣ ಹೊಂದಾಣಿಕೆ ಆಗುತ್ತದೆ ಎಂದರು.

ನೆರೆ ಸಂತ್ರಸ್ತರ ಕುರಿತು ಮೊಸಳೆ ಕಣ್ಣೀರು ಹಾಕುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಅಧಿಕಾರ ಪ್ರಮಾಣ ವಚನ ಸಂದರ್ಭದಲ್ಲಿ ಮಾತ್ರವೇ ರೈತರನ್ನು ಸ್ಮರಿಸಿದ್ದಾರೆ. ಆ ನಂತರ ರೈತರನ್ನು ವಂಚಿಸುವಲ್ಲೇ ಸಂಪೂರ್ಣ ನಿರತರಾಗಿದ್ದಾರೆ. ನೆರೆಯ ರಾಜ್ಯಗಳಲ್ಲಿಯ ಕನ್ನಡಿಗರ ಹಿತದ ಚಿಂತನೆಗೂ ಕೂಡ ಕ್ಷಣಹೊತ್ತು ಇವರು ಚಿಂತಿಸುತ್ತಿಲ್ಲ ಎಂದು ಟೀಕಿಸಿದರು.

ಶರಣರ ಸಮ್ಮಿಲನ :
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಹಂದ್ಯಾಳು ಗ್ರಾಮದ ಶಿವಶರಣರ ಮಠದಲ್ಲಿ ಡಿಸೆಂಬರ್ 11ರ ಶನಿವಾರ ಮಧ್ಯಾಹ್ನ 3.30ಕ್ಕೆ 96ನೇ ಮಹಾಮನೆ ದತ್ತಿ ಕಾರ್ಯಕ್ರಮ ಏರ್ಪಡಿಸಿದೆ. ಹಂದ್ಯಾಳು ಶ್ರೀಶಿವಶರಣ ಮಠದ ಧರ್ಮದರ್ಶಿ ಡಾ. ಎಚ್. ಮಲ್ಲಿಕಾರ್ಜುನಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ನಿವೃತ್ತ ಅಧೀಕ್ಷಕ ಅಭಿಯಂತರ ವೈ.ಎಲ್. ಕೃಷ್ಣಾರೆಡ್ಡಿ, ವೀರಶೈವ ಮಹಾ ವಿದ್ಯಾಲಯದ ಕನ್ನಡ ಉಪನ್ಯಾಸಕ ಎ.ಎಂ.ಪಿ. ವೀರೇಶಸ್ವಾಮಿ ಮುಖ್ಯ ಅತಿಥಿಗಳಾಗಿದ್ದಾರೆ.

English summary
Karnataka Rakshana Vedike unit of Bellary has blasted Karnataka Chief minister BS Yeddyurappa for his involvement in land scams in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X