ರತನ್ ಟಾಟಾ ಅವರೇ, ಏನ್ ಸ್ವಾಮಿ ಇದೂ?
ರೇಡಿಯಾ ಟೇಪ್ ವಿವಾದದಲ್ಲಿ ಸಿಲುಕಿರುವ ರತನ್ ಟಾಟಾ ಅವರು 2ಜಿ ತರಂಗಗುಚ್ಛ ಹಗರಣಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗೆ ಪ್ರತಿಯಾಗಿ ರಾಜೀವ್ ಚಂದ್ರಶೇಖರ್ ಅವರು ತಮ್ಮ ಅಸಮಾಧಾನವನ್ನು ಈ ಪತ್ರದ ಮುಖಾಂತರ ಹರಿಯಬಿಟ್ಟಿದ್ದಾರೆ.
2ಜಿ ತರಂಗಗುಚ್ಛ ಹಗರಣದಲ್ಲಿ ಟಾಟಾ ಕಂಪನಿಯೇ ಫಲಾನುಭವಿಯಾಗಿದ್ದು, ಟೆಲಿಕಾಂ ಸಚಿವರೊಬ್ಬರು ತಮಗೆ 15 ಕೋಟಿ ರು. ಲಂಚ ಕೇಳಿದ್ದರೆಂದು ರತನ್ ಟಾಟಾ ಅನೇಕ ದಿನಗಳ ನಂತರ ಪ್ರಸ್ತಾಪಿಸಿರುವುದು ಅನೇಕರ ಹುಬ್ಬು ಏರುವಂತೆ ಮಾಡಿದೆ ಮತ್ತು ನಂಬಿಕಾರ್ಹವಾಗಿದ್ದ ಭಾರತದ ಅತಿದೊಡ್ಡ ಕಂಪನಿಯ ನಂಬುಗೆಗೆ ಪೆಟ್ಟು ತಂದಿದೆ ಎಂದು ಟೆಲಿಕಾಂ ಉದ್ಯೋಗಿಯೂ ಆಗಿರುವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಬ್ಲಾಗ್ ನಲ್ಲಿ ವಿಸ್ತೃತವಾಗಿ ಬರೆದಿರುವ ಅವರು, 2ಜಿ ತರಂಗಗುಚ್ಛದ ಡೀಲ್ ಪಡೆಯಲು ಭಾರೀ ಲಾಬಿ ನಡೆಸಿದ ಟಾಟಾ ಸಮೂಹದಿಂದ ಭಾರತದ ಬೊಕ್ಕಸಕ್ಕೆ ಸುಮಾರು 19074.8 ಕೋಟಿ ರು.ಯಷ್ಟು ನಷ್ಟವಾಗಿದೆ. ಈ ಹಗರಣದಲ್ಲಿ ಸಾಕಷ್ಟು ಗೋಲ್ ಮಾಲ್ ನಡೆದಿದ್ದರೂ ಟಾಟಾ ಸಮೂಹ ಅದರ ಲಾಭ ಪಡೆಯಲು ಮುಂದಾಯಿತು ಎಂದು ಆರೋಪಿಸಿದ್ದಾರೆ.
ಖ್ಯಾತಿಯ ಉತ್ತುಂಗಕ್ಕೇರಿರುವ ಅತ್ಯುತ್ಕೃಷ್ಟ ಕಂಪನಿಯಾಗಿರುವ ಟಾಟಾ ಸಮೂಹ ಲಾಬಿ ನಡೆಸಲು ಮೂರನೇ ವ್ಯಕ್ತಿಯ ಸಹಾಯ ಪಡೆದದ್ದೇಕೆ ಎಂದು ರಾಜೀವ್ ಅವರು ರತನ್ ಟಾಟಾ ರೇಡಿಯಾ ಜೊತೆ ನಡೆಸಿದ ಮಾತುಕತೆ ಕುರಿತು ಪ್ರಸ್ತಾಪಿಸಿದ್ದಾರೆ. ನಂಬಿಕಾರ್ಹತೆಗೆ ಧಕ್ಕೆ ತರಲು ಇಷ್ಟು ಸಾಕು ಎಂದು ರಾಜೀವ್ ಚಂದ್ರಶೇಖರ್ ಹರಿಹಾಯ್ದಿದ್ದಾರೆ.
ರತನ್ ಟಾಟಾ ಅಂಥವರು ಬದಲಾವಣೆಯ ಹರಿಕಾರರಾಗುವ ಬದಲು, ಮೂಕ ಪ್ರೇಕ್ಷಕರಂತೆ ವರ್ತಿಸಿ ಇಂಥ ಹಗರಣಗಳಿಗೆ ಮೇವು ಹಾಕಿದ್ದು ಮನಸ್ಸಿಗೆ ನೋವು ಉಂಟು ಮಾಡಿದೆ. ದೇಶದಲ್ಲಿ ಅತ್ಯುತ್ತಮ ಬ್ರಾಂಡ್ ಮೌಲ್ಯವಿರುವ ಮತ್ತು ಭಾರತದ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಏರಿಸಿರುವ ಟಾಟಾ ಸಮೂಹದ ಬಗ್ಗೆ ಮತ್ತು ಅದಕ್ಕಾಗಿ ದುಡಿದಿರುವ ರತನ್ ಟಾಟಾ ಅವರ ಬಗ್ಗೆ ಅಪಾರವಾದ ಗೌರವವಿದ್ದುದರಿಂದ ಈ ಪತ್ರ ಬರೆದಿರುವುದಾಗಿ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.