ದಟ್ಸ್ ಕನ್ನಡ ಫಲಶ್ರುತಿ :ಸೆಂಟ್ರಲ್ ಮಾಲಲ್ಲಿ ಆಹಾ ಕನ್ನಡ
ಮೊದಲು ಬರೀ ಹಿಂದಿ ಹಾಡುಗಳಷ್ಟೇ ಕೇಳಿಬರುತ್ತಿದ್ದ ಆ ಮಾಲಿನಲ್ಲಿ ಕನ್ನಡ ಸಂಗೀತ ಈಗ ಕೇಳಿ ಬರುತ್ತಿದೆ. ಅಲ್ಲಿನ ಕೊಳ್ಳುಗ (ಗ್ರಾಹಕ) ಸೇವಾ ಕೇಂದ್ರದ ಮೊಂಡಲ್(ಬೆಂಗಾಲಿ) ಕನ್ನಡ ಹಾಡುಗಳು ತುಂಬ ಚೆನ್ನಾಗಿವೆ ಎಂದು ಮೆಚ್ಚಿಗೆ ಸೂಚಿಸಿದ. ಜೇರು ಕೂಡ ವಿನಯವಾಗಿ ಮಾತನಾಡಿಸಿ ಕಾಫಿ ಡೇಯಲ್ಲಿ ಕಾಫಿ ಕುಡಿಸಿ ಕೆಲ ಹೊತ್ತು ಮಾತನಾಡಿದರು. ಸೆಂಟ್ರಲ್ ಮಾಲಿನ ವ್ಯವಸ್ಥಾಪಕರಾದ ಆನಂದ್ ಅವರ ಬಳಿ ಈ ವಿಷಯ ಚರ್ಚಿಸಿದ್ದೇನೆ. ಕನ್ನಡ ಹಾಡುಗಳ ಪ್ರಸಾರಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಹಾಗೂ ಕನ್ನಡದ ಬಗ್ಗೆ ಅವರಿಗೂ ಗೌರವವವಿದ್ದು, ಮಾಲಿನ ಮುಂಬಾಗದಲ್ಲಿ ಸದ್ಯದಲ್ಲೇ ಕನ್ನಡ ಬಾವುಟ ಹಾರಿಸುವ ಕಾರ್ಯಕ್ರಮವೂ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು!
ಇಂದೂ ಕೂಡ ಬೆಂಗಳೂರು ಸೆಂಟ್ರಲ್ ಮಾಲಿನಲ್ಲಿ ಬಹಳಷ್ಟು ಕನ್ನಡಿಗ ಕೊಳ್ಳುಗರನ್ನು ನೋಡಿದೆ. ಅಲ್ಲಿ ಯಾವ ಹಾಡು ಪ್ರಸಾರ ಅಗುತ್ತಿದೆ ಎಂದು ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ವ್ಯಾಪಾರದಲ್ಲಿ ಮಗ್ನರಾಗಿದ್ದರು! ಈ ಮಾಲುಗಳಿಗೆ ಬೇಟಿ ನೀಡುವ ಕನ್ನಡಿಗರು ಸ್ವಲ್ಪ ಬಾಯಿಬಿಟ್ಟು ಕನ್ನಡಕ್ಕಾಗಿ ಒತ್ತಾಯಿಸಿದರೆ ಕನ್ನಡಕ್ಕೆ ಖಂಡಿತ ಜಾಗ ಸಿಗುತ್ತದೆ ಎನ್ನುವುದಕ್ಕೆ ಇದು ಒಂದು ಉದಾಹರಣೆ ಮಾತ್ರ. ಇದು ಇಷ್ಟಕ್ಕೇ ಮುಗಿಯುವುದಿಲ್ಲ. ನೀವು ಯಾರಾದರೂ ಈ ಮಾಲಿಗೆ ಬೇಟಿ ನೀಡಿದಾಗ ಕನ್ನಡ ಹಾಡು ಕೇಳಿಸದಿದ್ದರೆ ಒಮ್ಮೆ ಹೋಗಿ ನೆಲ ಮಹಡಿಯಲ್ಲೇ ಇರುವ ಅಲ್ಲಿನ ಡಿ.ಜೆ ಹತ್ತಿರ ಪ್ರಶ್ನೆ ಮಾಡಿ. ಸಾಕಷ್ಟು ಕನ್ನಡಿಗರು ಕನ್ನಡ ಹಾಡುಗಳಿಗೆ ಒತ್ತಾಯಿಸಿದರೆ ಅವರಿಗೂ ಕನ್ನಡಿಗರ ಒತ್ತಾಯವನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಈ ಅಧುನಿಕ ಯುಗದಲ್ಲಿ ಕನ್ನಡವನ್ನು ಬೆಂಗಳೂರಿನ ಮಾಲುಗಳಲ್ಲೂ ಪಸರಿಸಿ, ಕನ್ನಡ ಸಂಸ್ಕೃತಿಯನ್ನು ಬೆಳೆಸಬೇಕೆಂದು ಕನ್ನಡಿಗರಲ್ಲಿ ಕೋರುತ್ತೇನೆ.
ಈ ವಿಷಯದಲ್ಲಿ ನನಗೆ ಬರೆಯಲು ಹುರಿದುಂಬಿಸಿ ವಿಶ್ವಕನ್ನಡಿಗರಿಗೆ ಇದರ ಬಗ್ಗೆ ತಿಳಿಯುವಂತೆ ಲೇಖನ ಪ್ರಕಟಿಸಿ, ಜೇರು ಅವರಿಗೂ ಮಿಂಚೆ ಕಳುಹಿಸಿದ ದಟ್ಸ್ ಕನ್ನಡ ಸಂಪಾದಕರಾದ ಎಸ್.ಕೆ. ಶಾಮಸುಂದರ ಅವರಿಗೂ ಹಾಗೂ ಬೆಂಗಳೂರು ಸೆಂಟ್ರಲ್ ನ ಕೊಳ್ಳುಗ ಸೇವೆಯವರಿಗೆ, ಕನ್ನಡ ಹಾಡುಗಳಿಗೆ ಒತ್ತಾಯಿಸಿ ಮಿಂಚೆ ಕಳುಹಿಸಿದ ಎಲ್ಲ ಕನ್ನಡ ಪ್ರೇಮಿಗಳಿಗೂ ನನ್ನ ಹೃತ್ಪೂರ್ವಕ ನಮನಗಳು. ಈ ಹೊರಾಟದಲ್ಲಿ ಕನ್ನಡಿಗರಿಗೆ ತಕ್ಕ ಮಟ್ಟಿಗಿನ ಗೆಲುವು ಕಾಣಲು ಸಾಧ್ಯವಾಗಿರುವುದು ದಟ್ಸ್ ಕನ್ನಡದ ಫಲಶ್ರುತಿ ಎಂದರೆ ತಪ್ಪಲ್ಲ. ಜೇರು ಅವರ ಮಿಂಚೆ ವಿಳಾಸ: [email protected]
ಕನ್ನಡವೆನೆ ಕುಣಿದಾಡುವುದೆನ್ನೆದೆ ಕನ್ನಡವೆನೆ ಕಿವಿ ನಿಮಿರುವುದು - ಹಾಡು ಕೇಳಲು ಮರೆಯದಿರಿ.
ನಿಮ್ಮವ, ಸಂಪಿಗೆ ಶ್ರೀನಿವಾಸ