ಯಾರದೋ ಭೂಮಿಯಲಿ ಸಿಮೆಂಟ್ ಕಂಬ ನೆಟ್ಟ ರಾಘು!
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಸಮೀಪದ ರಾಷ್ಟ್ರೀಯ ಹೆದ್ದಾರಿ 206ರ ಪಕ್ಕದಲ್ಲಿಯೇ 17 ಎಕರೆ 10 ಗುಂಟೆ ಜಮೀನಿದೆ. ಈ ಪೈಕಿ ಸರ್ವೆ ನಂ.3/ಪಿ ಜಮೀನಿಗೆ ನಾನು ಖಾತೆದಾರನಾಗಿದ್ದು, 2 ಎಕರೆ ಜಮೀನು ನನ್ನ ಸ್ವಾಧೀನದಲ್ಲಿದೆ. ಈ ಜಮೀನನ್ನು 1985ರಲ್ಲಿ ನಾನು ಖರೀದಿಸಿದ್ದು, ಭೂ ಪರಿವರ್ತನೆಯೂ ಆಗಿದೆ ಎಂದು ವಿವರಿಸಿದರು.
ಈ ಜಮೀನನ್ನು ಸಂಸದ ಬಿ.ವೈ.ರಾಘವೇಂದ್ರ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಿಕೊಂಡು ಹೋಟೆಲ್ ಕಾಂಪ್ಲೆಕ್ಸ್ ಕಟ್ಟಲು ತಯಾರಿ ಮಾಡಿಸಿದ್ದಾರೆ. ನನ್ನ ಸ್ವಾಧೀನದಲ್ಲಿರುವ ಜಮೀನಿನಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ನನ್ನ ಹೆಸರನ್ನೇ ಪಹಣಿಯಿಂದ ಕೈಬಿಡಲು ಕುತಂತ್ರ ನಡೆಸಿದ್ದಾರೆ. ಈ ಜಾಗದಲ್ಲಿ ರಾತ್ರೋರಾತ್ರಿ ಅಕ್ರಮ ಸಿಮೆಂಟ್ ಕಂಬಗಳನ್ನು ನಿಲ್ಲಿಸಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದರು.
ಸರ್ವೆ ನಂ.3/ಪಿ ಜಮೀನನ್ನು 1985ರಲ್ಲಿ ಮಲ್ಲಿಗೇನಹಳ್ಳಿ ವಾಸಿ ತಿಮ್ಮಪ್ಪ ಬಿನ್ ಕೆಂಪತಿಮ್ಮಯ್ಯರವರಿಂದ ನಾನು ಶುದ್ಧ ಕ್ರಯಕ್ಕೆ ಖರೀದಿಸಿದ್ದೆ. ಈ ಸಂಬಂಧ ಎಲ್ಲಾ ದಾಖಲಾತಿಗಳು ನನ್ನ ಹೆಸರಿನಲ್ಲೇ ಇವೆ. ಈ ಪ್ರದೇಶ 1986-87ರಲ್ಲಿ ವಸತಿ ಉದ್ದೇಶಕ್ಕಾಗಿ ವಿಶೇಷ ಜಿಲ್ಲಾಧಿಕಾರಿಗಳ ಆದೇಶದಂತೆ ಭೂ ಪರಿವರ್ತನೆಯಾಗಿದೆ. ರಾಘವೇಂದ್ರ ಅಕ್ರಮ ಪ್ರವೇಶ ಮಾಡಿದಾಗ ನಾನು ತಕರಾರು ಮಾಡಿದ್ದೆ. ಆಗ ರಾಘವೇಂದ್ರ ಅಧಿಕಾರದ ದರ್ಪದಿಂದ ಅಸಭ್ಯವಾಗಿ ಮಾತನಾಡಿದ್ದರು. ನಂತರದಲ್ಲಿಯೂ ಸಹ ಹಲವಾರು ಬಾರಿ ಖುದ್ದಾಗಿ ರಾಘವೇಂದ್ರರವರನ್ನು ಭೇಟಿ ಮಾಡಿದಾಗಲೂ ಅವರು ಸ್ಪಂದಿಸಲಿಲ್ಲ ಎಂದು ಮಲ್ಲಿಕಾರ್ಜುನಪ್ಪ ತಮ್ಮ ನೋವು ತೋಡಿಕೊಂಡರು.
ರಾಘವೇಂದ್ರ ಅವರು ನನ್ನ ಜಮೀನನ್ನು ಅಕ್ರಮವಾಗಿ ಕಬಳಿಸಲು ಪ್ರಯತ್ನಿಸುತ್ತಿರುವ ಬಗ್ಗೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ಈ ಅರ್ಜಿಗೆ ಪ್ರಾಧಿಕಾರದಿಂದ ಮಾನ್ಯತೆ ಸಿಗಲಿಲ್ಲ. ಹಾಗಾಗಿ ನಾನು ಮಾಧ್ಯಮದ ಎದುರು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.