ಉಡುಪಿಯಲ್ಲಿ ಸಿಪಿಐ ಮಾವೋವಾದಿ ಬಂಧನ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪಶ್ಚಿಮ ವಲಯ ಐಜಿಪಿ ಅಲೋಕ್ ಮೋಹನ್, ಬಂಧಿತ ವ್ಯಕ್ತಿಯನ್ನು ತಮಿಳುನಾಡಿನ ನಿಷೇಧಿತ ಸಿಪಿಐ ಮಾವೋವಾದಿ ಸಂಘಟನೆಯ ಮಧುರೈ ಏರಿಯಾ ಕಮಾಂಡರ್ ಎನ್ ಶೇಖರ್ ಅಲಿಯಾಸ್ ರಂಜಿತ್ ಅಲಿಯಾಸ್ ರವಿ ಅಲಿಯಾಸ್ ಪ್ರೇಮ್ (25) ಎಂದು ಗುರುತಿಸಲಾಗಿದೆ ಎಂದರು.
ಆತ ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ಪಲ್ಲಿಪಟ್ಟು ತಾಲೂಕಿನ ಕುಮಾರಮಂಗಲಮ್ ನ ನಿವಾಸಿ ಎಸ್ ನಟರಾಜನ್ ಎಂಬವರ ಪುತ್ರ ಎಂದು ತಿಳಿದುಬಂದಿದೆ. ಶೇಖರ್ ತಮಿಳುನಾಡು ಹಾಗೂ ಇತರ ಕಡೆಗಳಲ್ಲಿ ನಕ್ಸಲ್ ಮುಖಂಡರ ಸಂಪರ್ಕ ಹೊಂದಿರುವ ಸಕ್ರಿಯ ನಕ್ಸಲ್ ಕಾರ್ಯಕರ್ತನೆಂದು ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಅಲೋಕ್ ಮೋಹನ್ ತಿಳಿಸಿದರು.
ಶೇಖರ್ ನಕ್ಸಲೀಯರಿಗೆ ಎಲ್ಲ ರೀತಿಯ ತರಬೇತಿ ನೀಡುವ ಪರಿಣತಿ ಹೊಂದಿದ ವ್ಯಕ್ತಿಯಾಗಿದ್ದು, ಆತನ ಕೈಯಲ್ಲಿದ್ದ ಬ್ಯಾಗ್ನಲ್ಲಿ ವಿಧ್ವಂಸಕ ಕೃತ್ಯಕ್ಕೆ ಬಳಸುವ 10 ಡಿಟೋನೇಟರ್, 5 ಜಿಲೇಟಿನ್ ಕಡ್ಡಿಗಳು ಮತ್ತು ಬತ್ತಿಗಳು, ವೈದ್ಯಕೀಯ ಚೀಟಿಗಳು ಹಾಗೂ ನಿಷೇಧಿತ ಮಾವೋವಾದಿ ಸಂಘಟನೆಯ ಕರಪತ್ರಗಳು ಸಿಕ್ಕಿವೆ ಎಂದು ಐಜಿಪಿ ವಿವರಿಸಿದರು.