8846 ಕೋ.ರು.ಗಳ ದಾನ ನೀಡಿದ ಪ್ರೇಮ್ ಜೀ
ಒಬ್ಬ ಉದ್ಯಮಿ ಹಳ್ಳಿಗಳ ಉದ್ಧಾರಕ್ಕಾಗಿ ಇಷ್ಟು ದೊಡ್ಡ ಮೊತ್ತವನ್ನು ಒಂದೇ ಕಂತಿನಲ್ಲಿ ಹಣವನ್ನು ದಾನವಾಗಿ ಘೋಷಣೆ ಮಾಡಿದ ಉದಾಹರಣೆ ಇಲ್ಲ. ಭಾರತದಲ್ಲಿರುವ ಶಾಲೆಗಳು ಸುಧಾರಣೆಯಾಗಬೇಕು. ಗುಣಮಟ್ಟದ ಶಿಕ್ಷಣ ಭಾರತೀಯ ಬಡಮಕ್ಕಳಿಗೆ ಸಿಗಬೇಕು ಎಂಬ ಉದ್ದೇಶದ ಜೊತೆಗೆ ಶಿಕ್ಷಣವೇ ದೇಶದ ಭವಿಷ್ಯವನ್ನು ನಿರ್ಧರಿಸಬಲ್ಲದು.
ಇದನ್ನು ಕೊಟ್ಟರೆ ಮಕ್ಕಳೆ ದೇಶಕ್ಕೆ ದೊಡ್ಡ ಆಸ್ತಿಯಾಗಬಲ್ಲರು ಎಂಬ ನಂಬಿಕೆ ಇಟ್ಟುಕೊಂಡು ಒಂದೇ ಕಂತಿನಲ್ಲಿ ಶಿಕ್ಷಣದ ಉದ್ಧಾರಕ್ಕಾಗಿ 8,846 ಕೋಟಿ ರುಪಾಯಿಗಳನ್ನು ನೀಡುತ್ತಿರುವುದಾಗಿ ಪ್ರೇಮ್ ಜೀ ತಿಳಿಸಿದ್ದಾರೆ. ಡಿಸೆಂಬರ್ 7ರೊಳಗೆ ಅಜೀಂ ಪ್ರೇಮ್ ಜೀ ಟ್ರಸ್ಟ್ ಗೆ ಹಣವನ್ನು ವರ್ಗಾವಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
2001ರಲ್ಲಿ ಅಜೀಂ ಪ್ರೇಮ್ ಜೀ ಫೌಂಡೇಷನ್ ಟ್ರಸ್ಟ್ ಸ್ಥಾಪಿಸಲಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈವರೆಗೆ ಸುಮಾರು 25 ಸಾವಿರ ಶಾಲೆಗಳೊಂದಿಗೆ ಟ್ರಸ್ಟ್ ನಿಕಟ ಸಂಪರ್ಕ ಹೊಂದಿದ್ದು, ಎರಡೂವರೆ ಲಕ್ಷ ವಿದ್ಯಾರ್ಥಿಗಳು ಕಂಪನಿಯ ಧನ ಸಹಾಯ ಪಡೆದುಕೊಂಡಿದ್ದಾರೆ. ಕರ್ನಾಟಕ ಸರಕಾರ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯ ಸ್ಥಾಪಿಸಲು ಅನುಮತಿ ನೀಡಿದ್ದು, ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಸುಮಾರು 75 ಜಾಗದಲ್ಲಿ ವಿಶ್ವವಿದ್ಯಾಲಯ ಆರಂಭಿಸಲಾಗುವುದು.
2011ಕ್ಕೆ ವಿಶ್ವವಿದ್ಯಾಲಯ ಶುರು ಮಾಡಲಾಗುವುದು. ಬಡಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ಸಹ ವಿಶ್ವವಿದ್ಯಾಲಯ ನೀಡಲಿದೆ ಎಂದು ಅಜೀಂ ಪ್ರೇಮ್ ಜೀ ವಿವರಿಸಿದರು. ಅಜೀಂ ಪ್ರೇಮ್ ಜೀ ಭಾರತದ ಮೂರನೇ ಸಿರಿವಂತ ವ್ಯಕ್ತಿಯಾಗಿದ್ದಾರೆ.