ದೇವರಕಾಡು, ನದಿಮೂಲ ರಕ್ಷಣೆಗೆ ಹೋರಾಟ ನಿಲ್ಲದು
ಸೋಮವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವರ ಕಾಡು ರಕ್ಷಣೆಗಾಗಿ ಅನೇಕ ರೀತಿಯ ಕಾರ್ಯ ಕ್ರಮಗಳನ್ನು ರೂಪಿಸಲಾಗಿದೆ. ಇಂತಹ ಕಾಡುಗಳನ್ನು ಗುರುತಿ ಸಲಾಗಿದ್ದು, ಇದರ ಮೇಲೆ ಅರಣ್ಯ ಇಲಾಖೆ ನಿಯಂತ್ರಣಕ್ಕೆ ಒಳಪಡಿಸಲು ಸರ್ಕಾರದ ಜೊತೆ ಸಮಾಲೋಚನೆ ನಡೆಸಲಾಗುತ್ತಿದೆ. ಇಂತಹ ಕಾಡುಗಳಲ್ಲಿ ದೊಡ್ಡ ಮರಗಳು ಹೇರಳವಾಗಿದ್ದು, ಇವುಗಳ ರಕ್ಷಣೆಗಾಗಿ ಸರ್ಕಾರ ಮುಂದಾಗಬೇಕು. ಜೊತೆಗೆ ಅರಣ್ಯ ಇಲಾಖೆಗೆ ಮರಗಳ ಬಗ್ಗೆ ರಕ್ಷಣೆ ತೆಗೆದುಕೊಳ್ಳಲು ಸೂಚನೆ ನೀಡಬೇಕು ಎಂದರು.
ಪಶ್ಚಿಮಘಟ್ಟ ಕಾರ್ಯಪಡೆ ಅರಣ್ಯ ರಕ್ಷಣೆಯ ಬಗ್ಗೆ ಬದ್ಧವಾಗಿದೆ. ಇದಕ್ಕಾಗಿ ಯೋಜನೆಗಳನ್ನು ರೂಪಿಸ ಲಾಗಿದೆ ಎಂದ ಅವರು, ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಸಮೀಪದ ಕುಲ್ಳುಂಡೆ ಎಂಬಲ್ಲಿ ಖಾಸಗಿ ವ್ಯಕ್ತಿಗಳು 100 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಭೂಮಿಯನ್ನು ಹೊಂದಿದ್ದು, ಇದು ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಈ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಗಳು ಹಕ್ಕು ಸ್ಥಾಪನೆ ಮಾಡಿದ್ದು, ಕಾಫಿ ಕಾನ್ ಪ್ರದೇಶದಲ್ಲಿ ದೊಡ್ಡ ದೊಡ್ಡ ಮರಗಳನ್ನು ಕಡಿಯಲು ಮುಂದಾಗಿದ್ದರು. ಪ್ರತ್ಯೇಕ್ಷವಾಗಿ ಆ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿಯನ್ನು ತೆಗೆದುಕೊಂಡು ಬಂದಿದ್ದೇನೆ. ಖಾಸಗಿ ವ್ಯಕ್ತಿಗಳು ಈಗಾಗಲೇ ನ್ಯಾಯಾಲಯದಲ್ಲಿ ತಮ್ಮ ಹಕ್ಕಿಗಾಗಿ ದೂರನ್ನು ದಾಖಲಿಸಿದ್ದಾರೆ.
ಆದರೆ, ಆ ಜಾಗದಲ್ಲಿ ಬೆಳೆಯನ್ನು ಬೇಕಾದರೆ ಬೆಳೆಯಲಿ. ಅಲ್ಲಿರುವಂತಹ ಮರಗಳನ್ನು ಕಡಿಯುವುದು ಸರಿಯಲ್ಲ. ಹೀಗಾ ಗಿಯೇ ಇಂತಹ ಪ್ರದೇಶಗಳನ್ನು ಅರಣ್ಯ ಇಲಾಖೆಯ ವಶಕ್ಕೆ ಪಡೆಯುವ ಸಂಬಂಧ ಹಾಗೂ ಸಂರಕ್ಷಣಾ ಕ್ರಮ ತೆಗೆದುಕೊಳ್ಳಲು ಸರ್ಕಾರದ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ನದಿಮೂಲ ರಕ್ಷಣೆ ಅಭಿಯಾನ : ಹಾಗೆಯೇ ಪಶ್ಚಿಮಘಟ್ಟ ಪ್ರದೇಶ ಗಳ ವ್ಯಾಪ್ತಿಯಲ್ಲಿರುವ 9 ಜಿಲ್ಲೆಗಳಲ್ಲಿ ನದಿಗಳ ಸಂರಕ್ಷಣೆಗಾಗಿ ನದಿಮೂಲ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಕುಮದ್ವತಿ ನದಿ ಮೂಲದಲ್ಲಿ ಅಲ್ಲಿನ ಸ್ಥಳೀಯರನ್ನೇ ಜೊತೆಗಿಟ್ಟುಕೊಂಡು ಜಾಗೃತಿ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗುವುದು. ಒಟ್ಟಾರೆ ಪಶ್ಚಿಮಘಟ್ಟ ಅರಣ್ಯ ಪ್ರದೇಶ ಹಾಗೂ ನದಿಗಳ ಉಳುವಿಗಾಗಿ ಎಲ್ಲಾ ರೀತಿಯಲ್ಲಿ ಹೋರಾಟ ನಡೆಯಲಿದೆ ಎಂದರು.